ಕೊಡಗು: ಮುಂದಿನ ವಾರ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಖಚಿತಪಡಿಸಿದ್ದು, ಇದಕ್ಕೂ ಮೊದಲೇ ಕೊಡಗು ಜಿಲ್ಲೆಯಲ್ಲಿ ಗಾಳಿ ಸಹಿತ ಮಳೆ ಆರಂಭವಾಗಿದೆ.
ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ, ಸುಂಟಿಕೊಪ್ಪ, ಮದೆನಾಡು, ತಲಕಾವೇರಿ ಹಾಗೂ ಭಾಗಮಂಡಲ ಸೇರಿದಂತೆ ವಿವಿಧೆಡೆಗಳಲ್ಲಿ ಕಳೆದ ಎರಡು ಗಂಟೆಯಿಂದ ಮಳೆ ಸುರಿಯುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೇ ಹವಾಮಾನ ಇಲಾಖೆಯಿಂದ ಯಲ್ಲೋ ಅಲಟ್9 ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಅಪಾಯದ ಸ್ಥಳಗಳಲ್ಲಿ ವಾಸ ಇರುವ ಗುಡ್ಡಗಾಡು ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿ ಎಂದು ಕಳೆದ ಕೆಲವು ದಿನಗಳ ಹಿಂದೆಯೇ ಜಿಲ್ಲಾಡಳಿತ ಮನವಿ ಮಾಡಿದೆ. ಹೀಗಾಗಿ ಸಣ್ಣ ಪ್ರಮಾಣದಲ್ಲಿ ಮಳೆ ಬಂದರು ಗುಡ್ಡಗಾಡು ಜನರು ಅತಂಕಕ್ಕೆ ಒಳಗಾಗುತ್ತಿದ್ದಾರೆ. ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ವಾರ ಭಾರೀ ಮಳೆ- ರೆಡ್ ಅಲರ್ಟ್ ಘೋಷಣೆ
ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ವರುಣ ಬಹುದೊಡ್ಡ ಅವಾಂತರವನ್ನೇ ಸೃಷ್ಠಿಸಿದ್ದ. 2018, 2019 ಹಾಗೂ 2020ರಲ್ಲಿ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಅನೇಕ ಹಳ್ಳಿಗಳೇ ಕೊಚ್ಚಿ ಹೋಗಿದ್ದವು. ಹೀಗಾಗಿ ಸುರಕ್ಷಿತ ಸ್ಥಳಗಳಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡಲಾಗಿದೆ. ಇದರ ಮಧ್ಯೆ ಇದೀಗ ಮತ್ತೆ ಮಳೆ ಸುರಿಯುತ್ತಿದೆ. ಹೀಗಾಗಿ ಮತ್ತೆ ಅನಾಹುತ ಸೃಷ್ಠಿಸುತ್ತಾ ಎನ್ನುವ ಭಯದಲ್ಲಿ ಜನರಿದ್ದಾರೆ.