ಹುಬ್ಬಳ್ಳಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ 23.23 ಕೋಟಿ ರೈತರ ಖಾತೆಗೆ ಜಮೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 9.50 ಕೋಟಿಗೂ ಹೆಚ್ಚಿನ ಫಲಾನುಭವಿ ಕೃಷಿ ಕುಟುಂಬಗಳಿಗೆ 19000 ಕೋಟಿಗೂ ಹೆಚ್ಚಿನ ಹಣವನ್ನು ವರ್ಗಾಯಿಸಲಾಗಿದೆ. ಅದರಲ್ಲಿ ಜಿಲ್ಲೆಯಲ್ಲಿ 1.16 ಲಕ್ಷ ರೈತ ಕುಟುಂಬಗಳಿಗೆ 23.23 ಕೋಟಿ ಆರ್ಥಿಕ ಸಹಾಯಧನ ರೈತರ ಖಾತೆಗಳಿಗೆ ಜಮೆಯಾಗಿದೆ ಎಂದರು. ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ವಾರ್ಷಿಕ 6000 ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಈ ಯೋಜನೆಯ ಅನುದಾನವನ್ನು 2000ಗಳಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತಿದೆ.
ಈ ವರೆಗೆ ಧಾರವಾಡ ಲೋಕಸಭಾ ಕ್ಷೇತ್ರದ 1.58 ಲಕ್ಷ ರೈತ ಕುಟುಂಬಗಳು ಕನಿಷ್ಠ ಒಂದು ಕಂತು ಪಡೆಯುವ ಮೂಲಕ ಯೋಜನೆಯ ಲಾಭವನ್ನು ಪಡೆದಿದ್ದರು. ಮಾರ್ಚ್ 2019ರಿಂದ ಮಾರ್ಚ್ 2021ರ ವರೆಗೆ 1.58 ಲಕ್ಷ ಕುಟುಂಬಗಳು ಒಟ್ಟು 237.3 ಕೋಟಿ ಆರ್ಥಿಕ ಸಹಾಯಧನ ಪಡೆದಿವೆ. 2021-22ನೇ ಸಾಲಿಗೆ 1.16 ಲಕ್ಷ ರೈತರಿಗೆ ಪ್ರಸಕ್ತ ವರ್ಷದ ಮೊದಲ ಕಂತಿಗೆ 23.23 ಕೋಟಿ ರೈತರ ಖಾತೆಗಳಿಗೆ ಜಮೆಯಾಗಿದೆ ಎಂದು ತಿಳಿಸಿದ್ದಾರೆ.