– ರಾಜ್ಯದ 28 ಕಡೆ ರೈಡ್
ಬೆಂಗಳೂರು: ಇಂದು ಬೆಳಂಬೆಳ್ಳಗೆ ಎಸಿಬಿ ಅಧಿಕಾರಿಗಳು ಕಾರವಾರ, ದಾವಣಗೆರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಕಾರವಾರ, ಕೋಲಾರ, ದಾವಣಗೆರೆ, ಚಿಕ್ಕಬಳ್ಳಾಪುರ ಸೇರಿದ ರಾಜ್ಯ 28 ಕಡೆ 9 ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ.
ಕಾರವಾರ: ಮೈಸೂರು ನಗರ ಯೋಜನೆಗಳ ಜಂಟಿ ನಿರ್ದೇಶಕ ಸುಬ್ರಹ್ಮಣ್ಯ ವಡ್ಡರ್ ಅವರ ಕಾರವಾರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶೋಧ ನಡೆಸಿದ್ದಾರೆ. ನಗರದ ಕೋಡಿಬಾಗ ರಸ್ತೆಯಲ್ಲಿರುವ ಮಲ್ಲಿಕಾರ್ಜುನ ಟಾಕೀಸ್ ಹಿಂಭಾಗ ಇರುವ ಅವರ ನಿವಾಸದಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಈ ಮನೆಯಲ್ಲಿ ಅವರ ಸಹೋದರ ವಾಸವಿದ್ದು, ಮನೆಯು ತಾಯಿ ಚನ್ನಮ್ಮ ವಡ್ಡರ್ರವರ ಹೆಸರಿನಲ್ಲಿದೆ. ಎ.ಸಿ.ಬಿ ಡಿವೈಎಸ್ಪಿ ಮಂಜುನಾಥ್ ಕೌರಿ ನೇತೃತ್ವದ ತಂಡದಿಂದ ತನಿಖೆ ಮುಂದುವರಿಸಿ ಮನೆಯ ದಾಖಲೆ ಪತ್ರಗಳ, ಆಸ್ತಿ ವಿವರದ ದಾಖಲೆಗಳ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿಕ್ಕಬಳ್ಳಾಪುರ: ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಪಿಡಿ. ಕೃಷ್ಣೇಗೌಡ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ನಗರ ಹೊರವಲಯದ ಕೈಗಾರಿಕಾ ಪ್ರದೇಶದ ಪಕ್ಕದಲ್ಲಿರುವ ಯೋಜನಾ ನಿರ್ದೇಶಕ ಕಚೇರಿ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಯೋಜನಾ ನಿರ್ದೇಶಕ ಕೃಷ್ಣೇಗೌಡ ವಾಸವಿರುವ ಚಿಕ್ಕಬಳ್ಳಾಪುರ ನಗರದ ಮುಷ್ಟೂರು ರಸ್ತೆಯ ಬಾಡಿಗೆ ನಿವಾಸದ ಮೇಲೆ ಹಾಗೂ ಕೋಲಾರದ ಸ್ವಗ್ರಾಮ ವೆಲಗಲಬುರ್ರೆ ಗ್ರಾಮದ ನಿವಾಸದ ಮೇಲೂ ಬೆಳ್ಳಂ ಬೆಳಿಗ್ಗೆ ದಾಳಿ ನಡೆಸಲಾಗಿತ್ತು. ಈಗ ಕಚೇರಿ ಮೇಲೂ ದಾಳಿ ಮಾಡಿರುವ ಅಧಿಕಾರಿಗಳು ಕಚೇರಿ ಮುಂಭಾಗ ನಿಂತಿದ್ದ ಕಾರಿನಲ್ಲೂ ಸಹ ತಪಾಸಣಾ ಕಾರ್ಯ ನಡೆಸಿದ್ದಾರೆ.
ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದರು. ಬೆಳಗ್ಗೆಯಿಂದಲೇ ಎಸಿಬಿ ದಾಳಿ ಆರಂಭಿಸಿ ಫ್ಯಾಕ್ಟರಿ ಮತ್ತು ಬೈಲರ್ ಇಲಾಖೆಯ ಉಪ ನಿರ್ದೇಶಕ ಕೆ.ಎಂ. ಪ್ರಥಮ ಅವರ ಕಚೇರಿ ಮೇಲೆ ದಾಳಿ ನಡೆಸಿದರು. ದಾವಣಗೆರೆ ಕಚೇರಿ ಹಾಗೂ ಬೆಂಗಳೂರಿನ ಸಂಜಯ ನಗರದ ಅವರ ಮನೆ, ಅವರ ತಾಯಿ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದರು. ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ಏಕಕಾಲಕ್ಕೆ ಮೂರು ಕಡೆ ದಾಳಿ ನಡೆಸಿ ಅಧಿಕಾರಿಗಳು ಕಚೇರಿಯಲ್ಲಿ ಕಡತ ಪರಿಶೀಲನೆ ಮಾಡಿದರು. ದಾವಣಗೆರೆ ನಗರದ ಪಿಬಿ ರಸ್ತೆಯ ಹಳೇ ಅಪೂರ್ವ ಹೋಟೆಲ್ ಹಿಂಭಾಗ ಇರುವ ಫ್ಯಾಕ್ಟರಿ ಮತ್ತು ಬೈಲರ್ ಇಲಾಖೆಯ ಮೇಲೂ ದಾಳಿ ನಡೆಸಿ ಕಡತ ಪರಿಶೀಲನೆ ನಡೆಸಿದರು.