– ಸಂಸದ ಉಮೇಶ್ ಜಾಧವ್ರಿಂದ ಸಮರ್ಪಣೆ
ಕಲಬುರಗಿ: ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬರೋಬ್ಬರಿ ಆರು ಕೋಟಿ ರೂಪಾಯಿ ಮೌಲ್ಯದ ಅಗ್ನಿಶಾಮಕ ವಾಹನ ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೇರ್ಪಡೆಯಾಗಿದೆ.
ಕಲಬುರಗಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಅವರು ಇಂದು ವಿಮಾನ ನಿಲ್ದಾಣದ ಸೇವೆಗೆ ಇದನ್ನು ಸಮರ್ಪಣೆ ಮಾಡಿದರು. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು 6 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಟ್ರಿಯಾ ದೇಶದಿಂದ ರೊಸೆನ್ ಬೌರ್ (ROSENBAUER) ಎಂಬ ವೊಲ್ವೋ ಕಂಪನಿಯ ಈ ಅಗ್ನಿಶಾಮಕ ವಾಹನವನ್ನು ಖರೀದಿಸಿ ತಂದಿದೆ.
ಇದರ ವಿಶೇಷತೆ:
ಅತಿಹೆಚ್ಚು ಉಷ್ಣಾಂಶ, ಶೀತ, ಹೊಗೆ, ಧೂಳುಮಯದಂತಹ ಪ್ರತಿಕೂಲ ವಾತಾವರಣದಲ್ಲಿಯೂ ಈ ಅಗ್ನಿಶಾಮಕ ವಾಹನ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಂಪೂರ್ಣ ಸ್ವಯಂಚಾಲಿತ ವಾಹನ ಇದಾಗಿದ್ದು, ಗರಿಷ್ಠ 121 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ಅಗ್ನಿ ಅವಘಡ ಸಂಭವಿಸಿದಾಗ 65 ಮೀಟರ್ ದೂರದವರೆಗೆ ನೀರು ಚಿಮುಕಿಸುವ ಶಕ್ತಿ ಇದಕ್ಕಿದೆ.
ಟ್ಯಾಂಕರ್ 6,000 ಲೀಟರ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದ್ದು, ಕಾರ್ಯಾಚರಣೆ ವೇಳೆ ಕೆಲವೇ ನಿಮಿಷಗಳಲ್ಲಿ 3,000 ಲೀಟರ್ ಹೊರಚಿಮ್ಮಿಸಿ ಬೆಂಕಿಯ ಜ್ವಾಲೆಗಳನ್ನು ಶಮನಗೊಳಿಸಲಿದೆ. 800 ಲೀಟರ್ ನೊರೆ (ರಾಸಾಯನಿಕ ಮಿಶ್ರಿತ) ಟ್ಯಾಂಕರನ್ನು ಕೂಡ ಒಳಗೊಂಡಿದೆ. ಅಂದರೆ ತೈಲಗಾರ, ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲಿ ಅತಿವೇಗವಾಗಿ ವ್ಯಾಪಿಸುವ ಬೆಂಕಿಯನ್ನು ನಂದಿಸಲು ಬಳಸುವ ನೊರೆ ಇದಾಗಿದೆ.
ಒಮ್ಮೆಗೆ ಇಡೀ ಅಗ್ನಿ ಅವಘಡ ಪ್ರದೇಶವನ್ನು ನಿಯಂತ್ರಿಸುವ ಹಾಗೂ ವಿಮಾನದ ರನ್ ವೇಗಳಲ್ಲಿ ಚಲಿಸುತ್ತಲೇ ಕಾರ್ಯಾಚರಿಸುವಂತಹ ಆನೆ ಬಲ ಇದಕ್ಕಿದೆ ಎಂದು ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರ್ ರಾವ್, ರಾಜ್ಯ ಅಗ್ನಿಶಾಮಕ ಇಲಾಖೆ ಅಧಿಕಾರಿ ಮಧು ರಾಠೋಡ್, ಏರ್ ಲೈನ್ಸ್ ಇಲಾಖೆ ಅಧಿಕಾರಿಗಳು ಮುಂತಾದವರು ಇದ್ದರು.