– ಎಕ್ಕರೆಗಟ್ಟಲೆ ಕೃಷಿಯನ್ನ ನುಂಗುತ್ತಿವೆ
ಮಂಗಳೂರು: ಬಸವನಹುಳು ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಮಳೆಗಾಲ ಆರಂಭವಾದರೆ ಅವುಗಳು ಎಲ್ಲಾ ಕಡೆ ಇರುತ್ತವೆ. ಇದೇ ಮಾದರಿಯ ಆಫ್ರಿಕನ್ ದೇಶದ ಬಸವನಹುಳುಗಳು ಈಗ ರೈತರಿಗೆ ಕಾಡಲು ಆರಂಭಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ವಿವಿಧ ಕಡೆ ಈ ಹುಳುವಿನ ಕಾಟ ತಡೆಯಲು ರೈತರಿಗೆ ಆಗುತ್ತಿಲ್ಲ. ರಬ್ಬರ್, ಅಡಿಕೆ, ತೆಂಗಿನಮರ ಸೇರಿದಂತೆ ಎಲ್ಲಾ ಕೃಷಿಯನ್ನು ಇವು ನಾಶಗೊಳಿಸುತ್ತಿವೆ. ಒಂದೇ ಬಾರಿಗೆ ಸಾಕಷ್ಟು ಸಂಖ್ಯೆಯಲ್ಲಿ ವೃದ್ಧಿಯಾಗುತ್ತಿರುವ ಇವುಗಳು ಒಂದು ಗಿಡಕ್ಕೆ ಹತ್ತಿದರೆ ಎಕರೆಗಟ್ಟಲೆ ಸಸ್ಯವನ್ನು ನಾಶಪಡಿಸುತ್ತವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ರೈತರು ಕೃಷಿಯನ್ನು ಉಳಿಸಿಕೊಳ್ಳುವುದು ಹೇಗೆ ಅಂತ ತಲೆಕೆಡಿಸಿಕೊಂಡು ವಿಜ್ಞಾನಿಗಳ ಮೊರೆ ಹೋಗಿದ್ದಾರೆ. ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿ ರೈತರಿಗೆ ಒಂದು ಪರಿಹಾರವನ್ನು ಕೂಡ ನೀಡಿದೆ.
ಕೃಷಿ ತೋಟಗಳಲ್ಲಿ ರೋಗಕ್ಕೆ ತುತ್ತಾದ ಪ್ರದೇಶ ಪತ್ತೆ ಹಚ್ಚಿ 100 ಚದರ ಅಡಿ ಪ್ರದೇಶದಲ್ಲಿ 50-80 ಗ್ರಾಂ ಮೆಟಾಲ್ಡಿಹೈಡ್ ರಾಸಾಯನಿಕ ಸಣ್ಣಸಣ್ಣ ತುಂಡುಗಳನ್ನು ಒಂದು ಎಕರೆ ತೋಟದಲ್ಲಿ ಮಾಡುವ ವಿಧಾನವನ್ನು ರೈತರಿಗೆ ತಿಳಿಸಿದರು. ಇದಲ್ಲದೆ ಅಡಿಕೆ ದೋಣಿಗಳನ್ನು ಸೆಲರಿ ನೀರಿನಲ್ಲಿ ಅದ್ದಿ ತೆಗೆದು ತೋಟದಲ್ಲಿ 4 ಇಂಚು ಎತ್ತರದಲ್ಲಿಡುವುದು. ಪಪ್ಪಾಯಿ, ಎಲೆ ಕೋಸು ತುಂಡುಗಳನ್ನು ಕೀಟನಾಶಕದಲ್ಲಿ ಲೇಪಿಸಿ ಅಡಿಕೆ ಹಾಳೆಗಳನ್ನು ಇಡಬಹುದಾಗಿದೆ.
ಇದು ರೈತರಿಗೆ ಅಷ್ಟು ಸಹಕಾರಿಯಾಗಲ್ಲ. ನಿರಂತರ ಪ್ರಕ್ರಿಯೆ ಆಗಿರುವುದರಿಂದ ಇದು ದುಬಾರಿಯಾಗುತ್ತೆ. ಬೆಳೆ ಉಳಿಸಿಕೊಳ್ಳಲು ಮತ್ತು ಜಮೀನನ್ನು ಕಾಪಾಡಿಕೊಳ್ಳಲು ರೈತ ಸಾಲಗಾರನಾಗಬೇಕಾಗುತ್ತದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನವಹಿಸಿ ರೈತನ ನೆರವಿಗೆ ಬರಬೇಕೆಂದು ರೈತರು ಆಗ್ರಹಿಸಿದ್ದಾರೆ.