ಚಿಕ್ಕಮಗಳೂರು: ಏಷ್ಯಾ ಖಂಡದ ಹೆಗ್ಗಳಿಕೆ ಜಿಲ್ಲೆಯ ಕೊಪ್ಪ ತಾಲೂಕಿನ ಸಹಕಾರ ಸಾರಿಗೆ ಸಂಸ್ಥೆಯಲ್ಲಿ ದಿನಗೂಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಗೋಪಾಲ್ ಪೂಜಾರಿ(55) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂಲತ: ಕೊಪ್ಪ ತಾಲೂಕಿನ ಗಡಿಕಲ್ ಮೂಲದವರಾಗಿದ್ದು ಸಹಕಾರ ಸಾರಿಗೆ ಸಂಸ್ಥೆಯಲ್ಲಿ ದಿನಗೂಲಿ ಚಾಲಕರಾಗಿದ್ದ ಗೋಪಾಲ್ ಪೂಜಾರಿ ಕೊಪ್ಪ ಪಟ್ಟಣದಲ್ಲಿ ಸಹೋದರನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ, ವಿವಿಧ ಸಂಘಗಳಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ ಗೋಪಾಲ್ ಕಳೆದ ಎರಡು ದಿನಗಳಿಂದ ಊರಿಗೂ ಹೋಗದೆ ಕೊಪ್ಪದಲ್ಲಿ ಸಹೋದರನ ಮನೆಯಲ್ಲೇ ತಂಗಿದ್ದರು.
ಕಳೆದೊಂದು ವರ್ಷದಿಂದ ಸಹಕಾರ ಸಾರಿಗೆ ತನ್ನೆಲ್ಲಾ ಸೇವೆಯನ್ನ ಬಂದ್ ಮಾಡಿತ್ತು. ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿ ಪುನಃ ಸೇವೆಯನ್ನು ಆರಂಭಿಸಿ ನೌಕರರಿಗೆ ಉದ್ಯೋಗ ಭದ್ರತೆ ಕೊಡಲು ಎಲ್ಲಾ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿರಲಿಲ್ಲ.
ಮಲೆನಾಡ ಜೀವನಾಡಿಯಾಗಿದ್ದ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ತನ್ನ 75 ಬಸ್ಗಳ ಸಂಚಾರವನ್ನ ಸಂಪೂರ್ಣ ಸ್ಥಗಿತಗೊಳಿಸಿತ್ತು. ಖಾಯಂ ನೌಕರರ ಪಿ.ಎಫ್. ಹಣ ಕೂಡ ಕಟ್ಟಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರಿಂದ ನೂರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೆ ತುತ್ತಾಗಿದ್ದರು. ಇದನ್ನೂ ಓದಿ: ಮಲೆನಾಡ ಸಹಕಾರ ಸಾರಿಗೆಗೆ ತಾತ್ಕಾಲಿಕ ಬೀಗ
ಇದೇ ಸಂಸ್ಥೆಯಲ್ಲಿ ಚಾಲಕರಾಗಿದ್ದ ಗೋಪಾಲ್ ಕೂಡ ಸಂಸ್ಥೆಗೆ ಬೀಗ ಬಿದ್ದ ಮೇಲೆ ಇತ್ತೀಚೆಗೆ ಖಾಸಗಿ ಬಸ್ನಲ್ಲಿ ಚಾಲಕರಾಗಿ ಸೇರಿಕೊಂಡಿದ್ದರು. ಆತ್ಮಹತ್ಯೆಗೆ ನಿಖರವಾರದ ಕಾರಣ ತಿಳಿದು ಬಂದಿಲ್ಲ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಈ ಸಂಸ್ಥೆ ದೇಶದಲ್ಲಷ್ಟೆ ಅಲ್ಲದೆ ಏಷ್ಯಾ ಖಂಡದಲ್ಲೇ ಹೆಸರುವಾಸಿಯಾಗಿತ್ತು. ಕಾರ್ಮಿಕರೇ ಮಾಲೀಕರಾಗಿ ಆರು ಬಸ್ನಿಂದ 75 ಬಸ್ಗಳವರೆಗೆ ಅಭಿವೃದ್ಧಿಯಾಗಿದ್ದರು. ಆದರೆ ಸರ್ಕಾರದ ಕಾನೂನು, ವಿಮೆ ಕೊನೆಗೆ ಕೋವಿಡ್ 19 ಲಾಕ್ಡೌನ್ ಸೇರಿದಂತೆ ನಾನಾ ಕಾರಣಗಳಿಂದ ಸಂಸ್ಥೆಗೆ ಬೀಗ ಬಿದ್ದಿತ್ತು. ಸಹಕಾರಕ್ಕಾಗಿ ಸರ್ಕಾರದ ಕದ ಬಡಿದರೂ ಯಾವುದೇ ಸಹಕಾರ ಸಿಕ್ಕಿರಲಿಲ್ಲ.