– ಸ್ಯಾಂಡಲ್ವುಡ್ ಕಲಾವಿದರಿಂದ ಎಸ್ಪಿಗಾಗಿ ಪ್ರಾರ್ಥನೆ
ಬೆಂಗಳೂರು: ಖ್ಯಾತ ಗಾಯಕ ಎಸ್ ಬಾಲಸುಬ್ರಹ್ಮಣ್ಯಂ ಅವರ ಬಗ್ಗೆ ಮಾತನಾಡಲು ನಾನು ತುಂಬಾ ಚಿಕ್ಕೋನು ಎಂದು ರಾಕಿಂಗ್ ಸ್ಟಾರ್ ಯಶ್ ಅವರು ಹೇಳಿದ್ದಾರೆ.
ಇಂದು ಚಾಮರಾಜಪೇಟೆಯಲ್ಲಿರೋ ಕಲಾವಿದರ ಸಂಘದ ಭವವದಲ್ಲಿ ಎಸ್ಪಿಬಿಯವರು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಎಸ್ಪಿಬಿ ಖಂಡಿತ ಹುಷಾರಾಗಿ ಬರುತ್ತಾರೆ. ಅವರನ್ನು ಮತ್ತೆ ಹಾಡಲು ಗುಣಮುಖರಾಗಿ ಬರಬೇಕು ಎಂದರು.
ನನಗೆ ಒಂದು ಖುಷಿ ಏನೆಂದರೆ, ನನ್ನ ರಾಕಿ ಸಿನಿಮಾಗಾಗಿ ಅವರು ಹಾಡು ಹಾಡಿದ್ದಾರೆ. ಅಂದು ನಾನೂ ಬಹಳ ಖುಷಿಪಟ್ಟಿದೆ. ಇಂದು ಅವರಿಗಾಗಿ ನಾನು ಪ್ರಾರ್ಥಿಸುತ್ತಿರುವುದು ಖುಷಿಯಾಗಿದೆ. ಹಂಸಲೇಖ ಹಾಗೂ ಎಸ್.ಪಿ.ಬಿಯವರು ಕಲಾವಿದರು ಅನ್ನುವುದಕ್ಕಿಂತ ಎಷ್ಟೋ ಜನಕ್ಕೆ ಬದುಕಿನ ಪಾಠ ಹೇಳಿಕೊಟ್ಟ ಗುರುಗಳು ಎಂದು ಹೇಳಬಹುದು. ನಾವು ನಮಗಾಗಿ ಪ್ರಾರ್ಥಿಸಿದರೆ ಈಡೆರುತ್ತೋ ಏನೋ ಗೊತ್ತಿಲ್ಲ. ಆದರೆ ನಿಸ್ವಾರ್ಥದಿಂದ ಬೇರೆಯವರಿಗಾಗಿ ಪ್ರಾರ್ಥಿಸಿದರೆ ಅದು ದೇವರಿಗೆ ತಲುಪುತ್ತೆ ಎಂದು ಯಶ್ ಹೇಳಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದ ಗಾಯಕ ವಿಜಯ್ ಪ್ರಕಾಶ್ ಮಾತನಾಡಿ, ಎಸ್ಪಿಬಿ ಹಾಡುಗಳನ್ನು ಕೇಳಿ ಬೆಳೆದವನು ನಾನು. ಹಲವಾರು ಬಾರಿ ನಾನು ಅವರ ಜೊತೆ ವೇದಿಕೆಗಳಲ್ಲಿ ಹಾಡುವಂತಹ ಭಾಗ್ಯ ಸಿಕ್ಕಿದೆ. ಗಾಯನದ ಹೊರತಾಗಿಯೂ ಅವರು ನನಗೆ ಯಾಕೆ ಇಷ್ಟ ಅಂದರೆ, 70ರ ದಶಕದಲ್ಲಿ ಅವರ ಜೊತೆ ಕೆಲಸ ಮಾಡಿದ ಕಲಾವಿದರನ್ನು ಈಗಲೂ ಸಹ ನೆನೆಯುತ್ತಾರೆ. ಆ ಮಟ್ಟಕ್ಕೆ ಜೊತೆಗೆ ಕೆಲಸ ಮಾಡಿದವರ ಮೇಲೆ ಅವರಿಗೆ ಗೌರವವಿದೆ ಎಂದರು.
ನಾನು ಇತ್ತೀಚಿಗೆ ಹಾಡಿದ್ದ ಒಂದು ಹಾಡನ್ನು ಅವರು ಕೇಳಿ ಪ್ರಶಂಸಿದ್ದರು. ಅಷ್ಟು ದೊಡ್ಡ ಗಾಯಕ ಆ ಮಟ್ಟಿಗೆ ಇನ್ನೊಬ್ಬರನ್ನು ಪ್ರೋತ್ಸಾಹ ಮಾಡುತ್ತಿದ್ದರು. ಅಂತಹ ಮಹಾನ್ ಗಾಯಕನಿಗೆ ಮೃತ್ಯುಂಜಯ ಮಂತ್ರದ ಮೂಲಕ ಗುಣಮುಖರಾಗಲು ಪ್ರಾರ್ಥಿಸುತ್ತೇನೆ ಎಂದು ಹಾಡು ಹಾಡಿದರು.