ರಾಯಚೂರು : ಜಿಲ್ಲೆಯ ಸಿರವಾರ ತಾಲೂಕಿನ ಗಣದಿನ್ನಿಯಲ್ಲಿ ಟಂಟಂ ಆಟೋ ಪಲ್ಟಿಯಾಗಿ 30 ಜನ ಕೂಲಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ.
ಐದು ಜನರ ಸ್ಥಿತಿ ಚಿಂತಾಜನಕವಾಗಿದ್ದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಣದಿನ್ನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೆಲಸ ಮುಗಿಸಿ ಮರಳುವಾಗi ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ ಹೊಡೆದಿದೆ. ಅಗತ್ಯಕ್ಕಿಂತ ಹೆಚ್ಚು ಜನರನ್ನ ಟಂಟಂ ನಲ್ಲಿ ತುಂಬಿಕೊಂಡು ಬರಲಾಗುತ್ತಿತ್ತು. ಸಾಮಾಜಿಕ ಅಂತರವನ್ನೇ ಮರೆತು ಕೆಲಸಕ್ಕೆ ಕರೆದೊಯ್ಯಲಾಗಿತ್ತು.
ಕೆಲಸ ಮುಗಿಸಿ ಗ್ರಾಮಕ್ಕೆ ಮರಳುವಾಗ ಟಂಟಂ ಪಲ್ಟಿಯಾಗಿದೆ. ಗಾಯಾಳುಗಳನ್ನ ಸಿರವಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೂಡಲೇ ರಾಯಚೂರಿನ ರಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಐದು ಜನರನ್ನ ಮಾತ್ರ ಬಳ್ಳಾರಿಗೆ ರವಾನಿಸಲಾಗಿದೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.