ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ತಾಲೂಕಿನಲ್ಲಿ 79 ಪ್ರಕರಣದಲ್ಲಿ ವಶಪಡಿಸಿಕೊಂಡ ಮಾದಕ ದ್ರವ್ಯಗಳನ್ನು ಇಂದು ನಾಶಪಡಿಸಲಾಯಿತು.
ಅಂಕೊಲ ತಾಲೂಕಿನ ಬೊಗ್ರಿಬೈಲಿನ ಕೆನರಾ ಐಎಮ್ಎ ಕಾನ್ಟ್ರಿಟ್ಮೆಂಟ್ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಪ್ರಕಾಶ್ ನೇತ್ರತ್ವದಲ್ಲಿ 69 ಪ್ರಕರಣದ 19,04,600 ರೂ. ಮೌಲ್ಯದ 88 ಕೆ.ಜಿ ತೂಕದ ಗಾಂಜಾ, 25500 ರೂ.ನ 504 ಗ್ರಾಂ.ತೂಕದ ಚರಾಸ್, 3,21,000 ರೂ. ಮೌಲ್ಯದ 431 ಗಾಂಜಾ ಸಸಿ ಸೇರಿ ಒಟ್ಟು 24,80,600 ರೂ. ಬೆಲೆಯ ಮಾದಕ ದ್ರವ್ಯ ನಾಶಪಡಿಸಲಾಯಿತು.
ಹಾವೇರಿಯಲ್ಲಿ 200 ಕೆ.ಜಿ. ಗಾಂಜಾ ನಾಶ
ಹಾವೇರಿ ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 200 ಕೆ.ಜಿ.ಯಷ್ಟು ಮಾದಕ ವಸ್ತುಗಳನ್ನು ಇಂದು ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ನಾಶ ಮಾಡಲಾಯಿತು.
ಜಿಲ್ಲೆಯಲ್ಲಿ 20 ಪ್ರಕರಣಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಮೌಲ್ಯದ 200 ಕೆ.ಜಿ.ಯಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಯಿತ್ತು. ಮಾದಕ ವಸ್ತುಗಳ ವಿಲೇವಾರಿ ಸಮಿತಿ ಸಮ್ಮುಖದಲ್ಲಿ ಹುಬ್ಬಳ್ಳಿಯ ಕೈಗಾರಿಕಾ ಕೇಂದ್ರದಲ್ಲಿ ಇಂದು ನಾಶಪಡಿಸಲಾಯಿತು. ಹಾವೇರಿ ಎಸ್ಪಿ ಹನುಮಂತರಾಯ ನೇತ್ರತ್ವದಲ್ಲಿ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ವಸ್ತುಗಳನ್ನ ನಾಶಪಡಿಸಲಾಯಿತು.
ಚಿಕ್ಕಬಳ್ಳಾಪುರದಲ್ಲಿ ಕೋಟ್ಯಂತರ ರೂ. ಗಾಂಜಾ ನಾಶ
ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾವನ್ನು ಇಂದು ಪೊಲೀಸರು ನಾಶಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2008 ರಿಂದ 2020 ರವರೆಗೂ 42 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 2,36,80,000 ಮೌಲ್ಯದ ಸರಿಸುಮಾರು 592 ಕೆ.ಜಿ ಗಾಂಜಾ ಗಿಡಗಳನ್ನು ಪೊಲೀಸರು ನಾಶಪಡಿಸಿದ್ದಾರೆ. ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆ ಬಳಿಯ ಕೈಗಾರಿಕಾ ಪ್ರದೇಶದ ರಾಮ್ಕೋ ಎನ್ವರೋ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಈ ಎಲ್ಲ ಗಾಂಜಾವನ್ನು ಸುಡಲಾಗಿದೆ. ಚಿಕ್ಕಬಳ್ಳಾಪುರ ಮಾತ್ರ ಅಲ್ಲದೆ ಕೇಂದ್ರವಲಯ ವ್ಯಾಪ್ತಿಯ ವಿವಿಧ ಜಿಲ್ಲೆಗಳ ಹಾಗೂ ಬೆಂಗಳೂರು ನಗರದಲ್ಲಿ ವಶಪಡಿಸಿಕೊಂಡಿರುವ ಸುಮಾರು 8,000 ಕೆ.ಜಿ.ಯಷ್ಟು ಗಾಂಜಾವನ್ನು ಸಹ ಸುಡಲಾಗಿದೆ. ಕಳೆದ 10-12 ವರ್ಷಗಳಿಂದ ಜಪ್ತಿ ಮಾಡಲಾಗಿದ್ದ ಗಾಂಜಾ ಇದಾಗಿದ್ದು, ಮೆಡಿಕಲ್ ವೇಸ್ಟ್ ಸುಟ್ಟು ಹಾಕುವ ಕೈಗಾರಿಕೆಯಲ್ಲಿ ಈ ಗಾಂಜಾವನ್ನು ಸುಟ್ಟು ಬೂದಿ ಮಾಡಲಾಗಿದೆ.