ಉಡುಪಿ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಉಡುಪಿಯ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣ ಎಸ್. ಹೆಬ್ಸೂರು ಮನೆ ಮೇಲೆ ಎಸಿಬಿ ಡಿ.ವೈ.ಎಸ್ಪಿ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಜ್ಯದ ವಿವಿಧೆಡೆಗಳಲ್ಲಿ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಎಸಿಬಿ ಶಾಕ್ ಕೊಟ್ಟಿದೆ. ಉಡುಪಿಯಲ್ಲಿಯೂ ದಾಳಿ ಮುಂದುವರಿದಿದೆ. ಉಡುಪಿ ನಗರದ ದೊಡ್ಡಣಗುಡ್ಡೆಯಲ್ಲಿರುವ ಕೃಷ್ಣ ಹೆಬ್ಸೂರು ಮನೆ, ಜಿಲ್ಲಾಡಳಿತ ಕಚೇರಿಯಲ್ಲಿರುವ ಇಲಾಖಾ ಕೊಠಡಿಯಲ್ಲಿ ಎಸಿಬಿ ಅಧಿಕಾರಿಗಳು ಕಡತಗಳನ್ನು ಜಾಲಾಡಿದ್ದಾರೆ. ಅಲ್ಲದೆ ಮಹತ್ವದ ದಾಖಲೆಗಳನ್ನು ತನಿಖೆಯ ಉದ್ದೇಶದಿಂದ ವಶಕ್ಕೆ ಪಡೆದಿದ್ದಾರೆ.
ಹೆಬ್ಸೂರು ಅವರ ತಾಳಿಕೋಟೆಯಲ್ಲಿರುವ ಮೂಲ ಮನೆಯ ಮೇಲೆಯೂ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಎಸಿಬಿ ಅಧಿಕಾರಿಗಳು ದಾಖಲೆ ಹಾಗೂ ಆಸ್ತಿ ಪತ್ರಗಳ ಪರಿಶೀಲನೆ ನಡೆಸುತ್ತಿದ್ದು, ಸಂಜೆಯವರೆಗೂ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ. ಉಡುಪಿಯ ದೊಡ್ಡಣ್ಣಗುಡ್ಡೆ ಮನೆಗೆ ದಾಳಿ ನಡೆದ ಸಂದರ್ಭ ಎಸಿಬಿ ಅಧಿಕಾರಿಗಳಿಗೆ ಬಾಗಿಲನ್ನು ತೆರೆದಿಲ್ಲ ಸುಮಾರು ಮತ್ತು ಅಧಿಕಾರಿಗಳನ್ನು ನಲ್ಲಿ ಕಾಯಿಸಿದ್ದಾರೆ ಎಂಬ ಮಾಹಿತಿ ಇದೆ. ಇದನ್ನೂ ಓದಿ: ಬೀದರ್, ದಾವಣಗೆರೆ, ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ
ಸರ್ಕಾರಿ ಕಾಮಗಾರಿಗಳಿಂದ ಆರೋಪಿತರು ಲಂಚ ರೂಪದಲ್ಲಿ, ಕಮಿಷನ್ ರೂಪದಲ್ಲಿ ಅಕ್ರಮವಾಗಿ ಹಣ ಗಳಿಸಿರುವ ಆರೋಪ ಇದೆ. ವರ್ಷದಿಂದೀಚೆ ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿರುವ ಎಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಘಟನೆ ಬಗ್ಗೆ ಹೆಬ್ಸೂರ ಯಾವುದೇ ಹೇಳಿಕೆಗಳನ್ನು ಈವರೆಗೆ ನೀಡಿಲ್ಲ. ಅಕ್ರಮ ಆಸ್ತಿ ಗಳಿಕೆ ಎಷ್ಟು? ಎಲ್ಲೆಲ್ಲಿ ಏನೇನು ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ಇನ್ನಷ್ಟೆ ಸಿಗಬೇಕಾಗಿದೆ.