ಉಡುಪಿ: ನಾನು ಬಿಜೆಪಿಯ ರಾಜ್ಯಾಧ್ಯಕ್ಷ, ಇವತ್ತಿನವರೆಗೆ ನನಗೆ ಮುಖ್ಯಮಂತ್ರಿ ಬದಲಾವಣೆ ಕುರಿತ ಹೈಕಮಾಂಡ್ ಸಂದೇಶದ ಯಾವುದೇ ಮಾಹಿತಿ ಬಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಡುಪಿಯಲ್ಲಿ ಹೇಳಿದ್ದಾರೆ.
ಮಾತನಾಡಿದ ಅವರು, ನಾನು ಕೇವಲ ಮಾಧ್ಯಮಗಳಿಂದ ಈ ವಿಚಾರ ತಿಳಿದುಕೊಂಡಿದ್ದೇನೆ. ಈ ಬಗ್ಗೆ ನನಗೆ ಹೇಳಲು ಏನೂ ಇಲ್ಲ ಎಂದರು. ಕೆಸರುಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸಿದ್ದೇನೆ. ರಾಜ್ಯದ ಟ್ರ್ಯಾಕ್ಟರ್ ಈಗ ಯಡಿಯೂರಪ್ಪ ಬಿಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಹಿಂದೆ ಅಹಿಂದ ಹೋರಾಟ ಮಾಡಿದವರು, ಅದರಿಂದಲೇ ಮುಖ್ಯಮಂತ್ರಿಗಳಾದರು. ಮುಖ್ಯಮಂತ್ರಿ ಆದಮೇಲೆ ಅಹಿಂದ ಮರೆತರು. ಈಗ ತಾಕತ್ತಿದ್ದರೆ ದಲಿತ ಸಿಎಂ ಮಾಡಿ ಎನ್ನುವವರು ತಾವು ಸಿಎಂ ಆದಾಗ ಅವರಿಗೆ ಏನು ಮಾಡಿದ್ದಾರೆ ಎಂದು ಕಟೀಲ್ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ- ದೆಹಲಿಗೆ ಹಾರಿದ ಸಚಿವ ನಿರಾಣಿ
ಸಿದ್ದರಾಮಣ್ಣ ಮುಖ್ಯಮಂತ್ರಿಯಾದ ಮೇಲೆ ಹಿಂದುಳಿದ ವರ್ಗಕ್ಕೆ ಏನೂ ಮಾಡಿಲ್ಲ. ದಲಿತ ಮುಖ್ಯಮಂತ್ರಿ ಎಂಬ ಚರ್ಚೆಯನ್ನೇ ಮುಚ್ಚಿಹಾಕಿದರು. ಕಾಂಗ್ರೆಸ್ನಲ್ಲಿ ರಾತ್ರಿ-ಹಗಲು ಕೆಲಸ ಮಾಡಿದ ಜಿ. ಪರಮೇಶ್ವರ್ ಅವರನ್ನು ಮೂಲೆಗುಂಪು ಮಾಡಿದರು. ಪರಮೇಶ್ವರ್ ಮತ್ತು ಖರ್ಗೆಯವರನ್ನು ಸೋಲಿಸಿದ ಇತಿಹಾಸ ಇದೆ. ಈಗ ತಾಕತ್ ಇದ್ದರೆ ದಲಿತ ಸಿಎಂ ಮಾಡಿ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮುಖಕ್ಕೆ ಟೊಮೆಟೊ ಹಚ್ಚಿ – ಉತ್ತಮ ತ್ವಚೆ ನಿಮ್ಮದಾಗಿಸಿಕೊಳ್ಳಿ
ವಾಜಪೇಯಿ ಸರ್ಕಾರ ಮುಸ್ಲಿಂ ಬಂಧುವನ್ನು ರಾಷ್ಟ್ರಪತಿ ಮಾಡಿದೆ. ನರೇಂದ್ರ ಮೋದಿ ಅವರು ದಲಿತ ರಾಷ್ಟ್ರಪತಿಯನ್ನು ದೇಶಕ್ಕೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ಗೋವಿಂದ ಕಾರಜೋಳರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ಕೇಂದ್ರದಲ್ಲಿ ನಾರಾಯಣಸ್ವಾಮಿ ಸಚಿವರಾಗಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ಶೇ. 30ರಷ್ಟು ಎಸ್ಸಿ ಎಸ್ಟಿ ಸಚಿವರಿದ್ದಾರೆ. ಕಾಂಗ್ರೆಸ್ ದಲಿತರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇರುವಾಗ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ನಳಿನ್, ಎಲ್ಲಾ ಸಚಿವರು ತಮ್ಮ ಕ್ಷೇತ್ರದಲ್ಲಿ ಇರುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಎಲ್ಲರೂ ಆಯಾಯ ಜಿಲ್ಲೆಯಲ್ಲಿದ್ದು, ನೆರೆ ಪರಿಹಾರದ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಅಲ್ಲದೇ ರಾಜ್ಯಾದ್ಯಂತ ಪ್ರವಾಸ ಮಾಡಿ ಸಾಂತ್ವನ ಹೇಳುತ್ತಿದ್ದಾರೆ ಎಂದರು.