ಬೆಂಗಳೂರು: ಶೀಘ್ರವೇ ಸಾರಿಗೆ ನೌಕರರ ಡಿಸೆಂಬರ್, ಜನವರಿಯ 15 ದಿನಗಳ ಸಂಬಳವನ್ನು ಹಾಕುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಭರವಸೆ ನೀಡಿದರು.
ಬುಧವಾರ ಸಾರಿಗೆ ನೌಕರರು ಪ್ರತಿಭಟನೆ ಮಾಡುವ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಸಾರಿಗೆ ನೌಕರರು ನಾಳೆ ಪ್ರತಿಭಟನೆ ಮಾಡುವ ಖಚಿತ ಮಾಹಿತಿ ಇಲ್ಲ. ನಾನು ಅಧಿಕಾರಿಗಳನ್ನು ಕರೆಸಿ ಮಾತನಾಡಿದ್ದೇನೆ. ಹಿಂದೆ ಪ್ರತಿಭಟನೆ ಮಾಡಿದಾಗ 9 ಬೇಡಿಕೆ ಇಟ್ಟಿದ್ದರು. ಇದರಲ್ಲಿ 4 ಬೇಡಿಕೆ ಇಡೇರಿಸಿದ್ದೇವೆ, 5 ಸಭೆ ನಡೆಸಿದ್ದೇವೆ ಅದು ಅವರಿಗೆ ಗೊತ್ತು. ಡಿಸೆಂಬರ್ ನ ಸಂಬಳವನ್ನು ಇನ್ನೆರಡು ದಿನಗಳಲ್ಲಿ ಹಾಕುತ್ತೇವೆ. ಜನವರಿಯ 15 ದಿನದ ಸಂಬಳವನ್ನು ಶೀಘ್ರ ಹಾಕುತ್ತೇವೆ ಎಂದು ಭರವಸೆ ನೀಡಿದರು.
ಆದಾಯ, ಇಂಧನ ಮತ್ತು ಸಂಬಳಕ್ಕೆ ಸರಿಯಾಗಿತ್ತಿದೆ. ಹಣಕಾಸು ಇಲಾಖೆ ಒಪ್ಪಿಕೊಂಡಿದೆ ಅದು ಎರಡು ದಿನದಲ್ಲಿ ಸರಿಯಾಗುತ್ತೆ. ಯಾವುದೇ ಅಡ್ಡಿ ಆತಂಕ ಇಲ್ಲದೆ ನಿಮ್ಮ ಸಂಬಳ ಕೊಡುವ ಕೆಲಸ ಮಾಡುತ್ತೇವೆ. ಅಲ್ಲದೆ ಇನ್ನು 15 ದಿನದಲ್ಲಿ ನೌಕರರ ಜೊತೆ ಸಭೆ ನಡೆಸಿ 6ನೇ ವೇತನ ಪರಿಷ್ಕರಣೆ ಬಗ್ಗೆಯೂ ಮಾತನಾಡುತ್ತೇನೆ. ಪ್ರತಿಭಟನೆ ನಡೆಸುವ ಬಗ್ಗೆ ಯಾರೂ ನನ್ನನ್ನು ಭೇಟಿ ಮಾಡಿಲ್ಲ, ಮನವಿ ಕೊಟ್ಟಿಲ್ಲ. ಮಾಧ್ಯಮಗಳಲ್ಲಿ ನೋಡಿಯಷ್ಟೇ ನನಗೆ ಮಾಹಿತಿ ತಿಳಿದಿದೆ ಎಂದು ಸ್ಪಷ್ಟಪಡಿಸಿದರು.
ಯಾವುದೇ ಸಾಲಪಡೆಯಲು ಆಸ್ತಿ ಅಡ ಇಡಬೇಕು, ಶ್ಯೂರಿಟಿ ಕೊಡಬೇಕು ಅದಕ್ಕೆ ಬಿಎಂಟಿಸಿ ಶಾಂತಿನಗರ ಕಟ್ಟಡ ಅಡಮಾನ ಮಾಡಲಾಗಿದೆ. ಎಲೆಕ್ಟ್ರಿಕ್ ಬಸ್ ಕೊಳ್ಳುತಿಲ್ಲ ಕೇಂದ್ರ ಸರ್ಕಾರದ ಸಬ್ಸಿಡಿ ಹಣದಲ್ಲಿ ಕಡಿಮೆ ದರದಲ್ಲಿ ಬಸ್ಗಳನ್ನು ಬಾಡಿಗೆಗೆ ಪಡೆಯಲಾಗುತ್ತಿದೆ.
ಈ ಕುರಿತು ಮಾಧ್ಯಮ ಪ್ರಕಟಣೆಯನ್ನು ಸಹ ಹೊರಡಿಸಿರುವ ಸಚಿವರು, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಸಿಬ್ಬಂದಿಯ ಬೇಡಿಕೆಗಳ ಪೂರೈಕೆಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ನಾಳೆ ಕೆಲ ಸಂಘಟನೆಗಳು ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ನಾಳೆ ಯಾವುದೇ ಬಸ್ ವ್ಯತ್ಯಯ ಆಗಲ್ಲ. ಡಿಸೆಂಬರ್ ಹಾಗೂ ಜನವರಿ ತಿಂಗಳ ಅರ್ಧ ವೇತನ ನೀಡಿದ್ದೇವೆ. ಶೀಘ್ರದಲ್ಲೇ ಉಳಿದ ಬಾಕಿ ವೇತನ ನೀಡತ್ತೇವೆ. ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ದಯವಿಟ್ಟು ಸಿಬ್ಬಂದಿ ಸಹಕರಿಸಬೇಕು ಎಂದು ಸಾರಿಗೆ ಸಚಿವರು ಮನವಿ ಮಾಡಿದ್ದಾರೆ.