ಚಾಮರಾಜನಗರ: ಕಳೆದ ಮೂರು ದಿನಗಳಿಂದ ಲಾಕ್ ಡೌನ್ ಮಾದರಿಯ ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಚಾಮರಾಜನಗರದಲ್ಲಿ ವಾಹನ ಸವಾರರು ಯಾವುದಕ್ಕೂ ಕೇರ್ ಮಾಡದೇ ಜನರು ಒಂದಲ್ಲ ಒಂದು ಕಾರಣ ಹೇಳಿಕೊಂಡು ಓಡಾಡುತ್ತಿದ್ದಾರೆ.
ನಗರದ ಭುವನೇಶ್ವರಿ ವೃತ್ತದ ದೃಶ್ಯಗಳನ್ನು ಕಣ್ಣಾರೆ ಕಂಡು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಸ್ಥಳದಲ್ಲೇ ಎಸ್ಪಿಗೆ ಫೋನ್ ಕರೆ ಮಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿಗೆ ಬಂದು ನೋಡಿ. ಯಾವ ರೀತಿ ಕರ್ಫ್ಯೂ ಉಲ್ಲಂಘನೆ ಆಗುತ್ತಿದೆ. ಮೂವರು ಪೊಲೀಸ್ ಸಿಬ್ಬಂದಿ ಬಿಟ್ಟರೆ ಸ್ಥಳದಲ್ಲಿ ಯಾವ ಹಿರಿಯ ಪೊಲೀಸ್ ಅಧಿಕಾರಿಯು ಇಲ್ಲ. ಸಂಬಂಧಪಟ್ಟ ಸಬ್ ಇನ್ಸ್ ಪೆಕ್ಟರ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಎಂದು ಸೂಚನೆ ನೀಡಿದರು.
ಹೀಗೆ ಹೇಳಿ ಫೋನ್ ಸಂಪರ್ಕ ಕಡಿತ ಮಾಡಿದ ಕೆಲವೇ ಹೊತ್ತಿನಲ್ಲಿ ತಕ್ಷಣ ಸ್ಥಳಕ್ಕೆ ಬಂದ ಡಿವೈಎಸ್ಪಿ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ರನ್ನು ಸಹ ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು. ಸಮಜಾಯಿಷಿ ನೀಡಲು ಬಂದ ಪೊಲೀಸ್ ಅಧಿಕಾರಿಗಳ ವಿರುದ್ದ ಮತ್ತೆ ಗರಂ ಆದ ಜಿಲ್ಲಾಧಿಕಾರಿ, ಇದೇನಾ ಕರ್ಫ್ಯೂ? ಅರ್ಥ ಆಗ್ತಾ ಇಲ್ವಾ? ಯಾವ ಭಾಷೆಯಲ್ಲಿ ಹೇಕಬೇಕು? ಮಾತು ಕಡಿಮೆ ಮಾಡಿ ಕೆಲಸ ಮಾಡಿ. ಹೀಗೆ ಜನ ಸಂಚರಿಸಲು ಬಿಟ್ಟರೆ ಏನು ಪ್ರಯೋಜನ? ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಸೀಜ್ ಮಾಡಿ, ಕೇಸ್ ಹಾಕಿ ಜನಸಂಚಾರ ನಿಯಂತ್ರಣ ಮಾಡಿ ಎಂದು ಖಡಕ್ ಸೂಚನೆ ನೀಡಿದರು.