ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದಾದ್ಯಂತ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಗರ ಸ್ಮಾರ್ಟ್ ಆಗುತ್ತಿದೆ. ಆದರೆ ಇದೇ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮಾಡುತ್ತಿರುವ ಕಾಮಗಾರಿ ಸಾರ್ವಜನಿಕರ ನಗೆಪಾಟಲಿಗೆ ಕಾರಣವಾಗಿದೆ.
ನಗರದ ಸೈನಿಕ ಪಾರ್ಕ್ ಬಳಿ ಚರಂಡಿಯೊಳಗೆ ವಿದ್ಯುತ್ ಕಂಬ ಇದ್ದರೂ ಅವುಗಳನ್ನು ಸ್ಥಳಾಂತರ ಮಾಡದೇ ಚರಂಡಿ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಇಂತಹ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿ ನಕ್ಕು ಸುಮ್ಮನಾಗಿರುತ್ತೇವೆ. ಆದರೆ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಅದರಲ್ಲೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳ ವಸತಿ ಗೃಹಗಳು ಇರುವ ಸಮೀಪವೇ ಇಂತಹ ಅವೈಜ್ಞಾನಿಕ ಕಾಮಗಾರಿ ನಡೆದಿದೆ.
ಚರಂಡಿ ನಿರ್ಮಾಣ ಮಾಡುವ ಮೊದಲು ಈ ಕಂಬಗಳನ್ನು ಸ್ಥಳಾಂತರಿಸಬೇಕಿತ್ತು. ಆದರೆ ಅವುಗಳನ್ನು ಸ್ಥಳಾಂತರ ಮಾಡದೇ ಅವು ಇರುವ ಜಾಗದಲ್ಲೇ ಬಿಟ್ಟು ಚರಂಡಿ ನಿರ್ಮಾಣ ಮಾಡುವ ಮೂಲಕ ಇಂಜಿನಿಯರ್ ಗಳು ಕಾಮಗಾರಿ ಮಾಡಿ, ಎಡವಟ್ಟು ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ನಿವಾಸದ ಬಳಿಯೇ ಈ ಕಾಮಗಾರಿ ನಡೆದಿರುವುದು ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತಿದೆ.