ಮೈಸೂರು: ತಾಯಿಯನ್ನು ತನ್ನ ಹಳೇ ಬೈಕಿನಲ್ಲೇ ದೇಶ ಪರ್ಯಟನೆ ಮಾಡಿಸಿದ್ದ ಶ್ರವಣಕುಮಾರನಿಗೆ ಮಹೀಂದ್ರಾ ಕಂಪನಿ ಓನರ್ ಆನಂದ್ ಮಹೀಂದ್ರಾ ಅವರು ಒಂದು ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.
ಮೈಸೂರಿನ ಬೋಗಾದಿಯ ನಿವಾಸಿ ಕೃಷ್ಣಕುಮಾರ್ ತನ್ನ ಹೆತ್ತ ತಾಯಿಯನ್ನು ಬಜಾಜ್ ಸ್ಕೂಟರಿನಲ್ಲಿ ದೇಶ ಪರ್ಯಟನೆ ಮಾಡಿಸಿದ್ದರು. ಕೃಷ್ಣಕುಮಾರ್ ಬೇಲೂರು ಹಳೇಬೀಡನ್ನೂ ನೋಡದ ತಾಯಿಗೆ ದೇಶದ ಎಲ್ಲ ತೀರ್ಥ ಕ್ಷೇತ್ರಗಳಿಗೂ ಕರೆದುಕೊಂಡು ಹೋಗಿ ಅವರ ಇಚ್ಛೆಯನ್ನು ಪೂರೈಸಿದ್ದರು. ಮಗನ ಈ ಕಾರ್ಯಕ್ಕೆ ಆನಂದ್ ಮಹೀಂದ್ರಾ ಫಿದಾ ಆಗಿದ್ದರು.
ಕೃಷ್ಣಕುಮಾರ್ ಅವರಿಗೆ ತನ್ನ ತಾಯಿ ಮೇಲೆ ಇರುವ ಪ್ರೀತಿಯನ್ನು ಮೆಚ್ಚಿಕೊಂಡಿದ್ದ ಆನಂದ್ ಮಹೀಂದ್ರಾ ಅವರು ಒಂದು ಕಾರನ್ನು ಗಿಫ್ಟ್ ಆಗಿ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಅಂತಯೇ ಅವರು ಮೈಸೂರಿಗೆ ಬಂದ ಎರಡನೇ ದಿನದಲ್ಲಿ ಮೈಸೂರಿನ ಮಹೀಂದ್ರಾ ಶೋರೂಂಗೆ ಕರೆಸಿ ಕಾರು ನೀಡಲಾಗಿದೆ. ಮಹೀಂದ್ರಾ ಕೆಯುವಿ-100 ಕಾರನ್ನು ಕೃಷ್ಣಕುಮಾರ್ ಮತ್ತು ಅವರ ತಾಯಿಗೆ ಅಲ್ಲಿನ ಶೋರೂಂ ಸಿಬ್ಬಂದಿಗಳು ಗಿಫ್ಟ್ ಮಾಡಿದ್ದಾರೆ.
40 ವರ್ಷ ವಯಸ್ಸಿನ ಕೃಷ್ಣಕುಮಾರ್ ಬೆಂಗಳೂರಿನ ಕಾರ್ಪೊರೇಟ್ ಸಂಸ್ಥೆಯೊಂದರ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಸುಮಾರು 5 ವರ್ಷಗಳ ಹಿಂದೆ ತಂದೆಯನ್ನ ಕಳೆದುಕೊಂಡ ಕೃಷ್ಣಕುಮಾರ್ ತಾಯಿಯ ಜವಾಬ್ದಾರಿ ಹೊತ್ತಿದ್ದರು. ಇವರು 70 ವರ್ಷದ ತಾಯಿಗೆ ದೇಶದ ತೀರ್ಥ ಕ್ಷೇತ್ರಗಳ ತೋರಿಸುವ ಸಂಕಲ್ಪ ಮಾಡಿದ್ದರು. ಅದರಂತೆಯೇ ಮಾತೃ ಸೇವಾ ಸಂಕಲ್ಪ ಯಾತ್ರೆ ಶುರು ಮಾಡಿದ್ದು, ತಂದೆ ಕೊಡಿಸಿದ ಬಜಾಜ್ ಸ್ಕೂಟರ್ನಲ್ಲೇ ತಾಯಿಯ ಜೊತೆ 2018ರ ಜನವರಿ 16ರಂದು ಯಾತ್ರೆ ಆರಂಭಿಸಿದ್ದರು.
ಎರಡು 9 ತಿಂಗಳ ಕಾಲ ಯಾತ್ರೆ ನಡೆಸಿದ್ದಾರೆ. ಚಾಮುಂಡಿ ಬೆಟ್ಟದಿಂದ ಶುರುವಾದ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದೆ. ಒಟ್ಟು 56,522 ಕಿಲೋಮೀಟರ್ ಪ್ರಯಾಣ ಮುಗಿಸಿದ ತಾಯಿ ಮಗ ಜೋಡಿ ಇಂದು ಮೈಸೂರಿಗೆ ವಾಪಸ್ ಬಂದಿದ್ದಾರೆ. ತಾಯಿ ಚೂಡಾರತ್ನ ಅವರಿಗೆ ಈಗ 70 ವರ್ಷ. 70ರ ಇಳಿ ವಯಸ್ಸಿನಲ್ಲಿ ಸ್ಕೂಟರಿನಲ್ಲಿ ಯಾತ್ರೆ ಕೈಗೊಳ್ಳುವುದು ಸುಲಭದ ಮಾತಲ್ಲ. ಆದರೆ ಮಗನ ಮೇಲೆ ಭರವಸೆ ಇಟ್ಟು ಯಾತ್ರೆ ಮಾಡಿ ದೇಶದ ಪ್ರತಿಯೊಂದು ಧಾರ್ಮಿಕ ಸ್ಥಳಗಳನ್ನೂ ನೋಡಿ ಬಂದಿದ್ದಾರೆ.