ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಅಜಿಂಕ್ಯ ರಹಾನೆ ಮತ್ತು ಬಳಗವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೊಲಿ ಗುಣಗಾನ ಮಾಡಿದ್ದಾರೆ.
ಪ್ರಥಮ ಟೆಸ್ಟ್ ಸೋತು ಕಂಗಾಲಾಗಿದ್ದ ಭಾರತ ಎರಡನೇ ಟೆಸ್ಟ್ನಲ್ಲಿ ಕಮ್ಬ್ಯಾಕ್ ಮಾಡಿತ್ತು. ಇದರಲ್ಲಿ ಪ್ರಮುಖವಾಗಿ ಅಜಿಂಕ್ಯ ರಹಾನೆ ತಮ್ಮ ನಾಯಕತ್ವದ ಜೊತೆಗೆ ಅಮೋಘ ಶತಕದ ಆಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದನ್ನು ಕಂಡು ಸಂತೋಷಗೊಂಡಿರುವ ಗಂಗೂಲಿ ಅಜಿಂಕ್ಯ ರಹಾನೆ ಮತ್ತು ಇಡೀ ತಂಡವನ್ನು ಶ್ಲಾಘಿಸಿ ವಿಶೇಷ ಪ್ರಯತ್ನದ ಮುಖಾಂತರ ಗೆಲುವು ತಮ್ಮದಾಗಿಸಿಕೊಂಡಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.
ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ವಿಶೇಷವಾದ ಗೆಲುವು. ಭಾರತ ಇಲ್ಲಿ ಆಟವಾಡಲು ತುಂಬಾ ಇಷ್ಟಪಡುತ್ತದೆ. ಈ ಮೈದಾನದಲ್ಲಿ ಉತ್ತಮವಾಗಿ ಆಡಿದ ಅಜಿಂಕ್ಯ ರಹಾನೆ ಪಡೆಗೆ ಮುಂದಿನ ಎರಡು ಪಂದ್ಯಗಳಿಗೆ ಶುಭವಾಗಲಿ ಎಂದು ಟ್ವೀಟ್ನಲ್ಲಿ ಗಂಗೂಲಿ ಶ್ಲಾಘಿಸಿದ್ದಾರೆ.
ವಿಶೇಷವಾಗಿ ಇದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತಕ್ಕೆ ಸಿಕ್ಕ 4ನೇ ಟೆಸ್ಟ್ ಗೆಲುವು. ವಿದೇಶಿ ನೆಲದಲ್ಲಿ ಭಾರತ ಆಟವಾಡಿ ಹೆಚ್ಚುಬಾರಿ ಗೆದ್ದ ನೆಲಕ್ಕೆ ಮೆಲ್ಬರ್ನ್ ಸಾಕ್ಷಿಯಾಗಿದೆ. ಈ ಹಿಂದೆ ಕ್ವೀನ್ಸ್ ಪಾರ್ಕ್ ಓವೆಲ್ ಟ್ರೆನಿಡಾಡ್, ಸಬಿನಾ ಪಾರ್ಕ್ ಜಮೈಕಾ ಮತ್ತು ಕೊಲಂಬೊದ ಎಸ್ಎಸ್ಸಿಯಲ್ಲಿ ತಲಾ 3 ಟೆಸ್ಟ್ಗಳನ್ನು ಗೆದ್ದಿದ್ದ ದಾಖಲೆಗೆ ಸಾಕ್ಷಿಯಾಗಿತ್ತು
ಸಂಪೂರ್ಣವಾಗಿ ಈ ಪಂದ್ಯ ರಹಾನೆಯ ಪಾಲಾಗಿತ್ತು. ಆಡಿಲೇಡ್ನಲ್ಲಿ ಮೊದಲನೇ ಟೆಸ್ಟ್ ಸೋತು ನಿರಾಸೆ ಅನುಭವಿಸಿದ್ದ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ರಹಾನೆ, ವಿರಾಟ್ ಕೊಹ್ಲಿಯ ಅನುಪಸ್ಥಿತಿಯನ್ನು ಮರೆಮಾಚಿದರು. ಭಾರತದ ಮೊದಲ ಇನ್ನಿಂಗ್ಸ್ನಲ್ಲಿ 326 ರನ್ ಗಳಿಸಿತ್ತು. ಈ ಇನ್ನಿಂಗ್ಸ್ನಲ್ಲಿ ರಹಾನೆ ಉತ್ತಮವಾಗಿ ಬ್ಯಾಟ್ ಬೀಸಿ 112ರನ್ ಗಳಿಸಿದ್ದರು. ಅಷ್ಟೇ ಅಲ್ಲದೇ ಆಡಿಲೇಡ್ನ ಮುಖಭಂಗದಿಂದ ಹೊರಬರಲು ಅಡುವ ಬಳಗದಲ್ಲಿ ಪ್ರಮುಖ ನಾಲ್ಕು ಬದಲಾವಣೆ ಮಾಡಿಕೊಂಡು ಅಂಕಣಕ್ಕೆ ಇಳಿದಿದ್ದ ರಹಾನೆ ತಂಡವನ್ನು ಉತ್ತಮವಾಗಿ ನಿರ್ವಹಿಸಿದರು.
ಸರ್ವಾಂಗೀಣ ಪ್ರದರ್ಶನವನ್ನು ನೀಡಿದ್ದ ತಂಡಕ್ಕೆ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಆರ್ ಅಶ್ವಿನ್ ಮತ್ತು ಇತರ ಬೌಲರ್ಗಳು ಮೇಲುಗೈ ಒದಗಿಸಿಕೊಟ್ಟರೆ, ಬ್ಯಾಟಿಂಗ್ ವಿಭಾಗದಲ್ಲಿ ಅಜಿಂಕ್ಯ ರಹಾನೆ, ಶುಭಮನ್ ಗಿಲ್ ಮತ್ತು ರವೀಂದ್ರ ಜಡೇಜಾ ಭಾರತಕ್ಕೆ ನೆರವಾಗಿದ್ದರು.
ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಭಾರತ ಗೆಲುವಿನೊಂದಿಗೆ ಸರಣಿಯನ್ನು 1-1 ರಲ್ಲಿ ಸಮಬಲವಾಗಿಸಿದೆ. ಮೂರನೇ ಟೆಸ್ಟ್ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಜನವರಿ 7ರಂದು ಅರಂಭಗೊಳ್ಳಲಿದೆ.