ಮಂಡ್ಯ: ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕಾಗಿ ಕಾರ್ಯಕರ್ತರು ಸುಮಾರು ಮೂರು ಗಂಟೆಯವರೆಗೂ ಕಾದು ಕುಳಿತ್ತಿದ್ದ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಬಳಿ ನಡೆದಿದೆ.
ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರನ್ನು ಜಮಾತೆ ಉಲಮಾ ತಂಡದ ಕಾರ್ಯಕರ್ತರು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆದರೆ ಶವ ಸಂಸ್ಕಾರಕ್ಕೆ ಬೇಕಾದ ಕ್ರಮ ಕೈಗೊಳ್ಳದ ಪರಿಣಾಮ ರಸ್ತೆಯ ಪಕ್ಕದಲ್ಲಿ ಮೃತದೇಹದ ಜೊತೆ ಅಂಬುಲೆನ್ಸ್ ನಿಲ್ಲಿಸಿಕೊಂಡು ಕಾರ್ಯಕರ್ತರು ನಿಂತಿದ್ದರು.
ಅಂತ್ಯ ಸಂಸ್ಕಾರ ಮಾಡಲು ಇಂದು ಮುಂಜಾನೆ ಸುಮಾರು 5.30ಕ್ಕೆ ಶವವನ್ನು ಜಿಲ್ಲಾಡಳಿತ ಹಸ್ತಾಂತರಿಸಿತ್ತು. ಆದರೆ ಸುಮಾರು ಮೂರು ಗಂಟೆಗಳ ಕಾಲ ಕಾದರೂ ಶವ ಸಂಸ್ಕಾರಕ್ಕೆ ಬೇಕಾದ ಕ್ರಮ ಕೈಗೊಂಡಿರಲಿಲ್ಲ. ಅಂಬುಲೆನ್ಸ್ ನತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ಬಂದಿಲ್ಲ, ಅಂತ್ಯ ಸಂಸ್ಕಾರಕ್ಕೆ ಗುಂಡಿ ತೆಗೆಯಲು ಜೆಸಿಬಿಯೂ ಬಂದಿರಲಿಲ್ಲ.
ಹೀಗಾಗಿ ಮೃತನ ಸಂಬಂಧಿಕರ ಸಹಕಾರ, ಆರೋಗ್ಯ ಇಲಾಖೆಯ ಸಹಕಾರವಿಲ್ಲದೆ ಕಾರ್ಯಕರ್ತರು ಶವವನ್ನ ರಸ್ತೆ ಬದಿಯಲ್ಲೇ ನಿಲ್ಲಿಸಿಕೊಂಡು ಸುಮಾರು ಮೂರು ಗಂಟೆ ಕಾಯುತ್ತಿದ್ದರು. ಇದರಿಂದ ಕಾರ್ಯಕರ್ತರು ಜಿಲ್ಲಾಡಳಿತದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಕೊನೆಗೆ ಮೂರು ಗಂಟೆಯ ನಂತರ ಅಧಿಕಾರಿಗಳು ಬಂದಿದ್ದು, ಸೋಂಕಿತನ ಅಂತ್ಯಸಂಸ್ಕಾರ ನಡೆಸಲಾಗಿದೆ.