ಉಡುಪಿ: ನನ್ನಿಂದ ನೋವಾಗಿದ್ದರೆ ಕ್ಷಮಿಸಿ. ನಿಮ್ಮಲ್ಲಿ ಆತಂಕ ಸೃಷ್ಟಿಸಿದ್ದಕ್ಕೆ ಕ್ಷಮೆ ಇರಲಿ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ಇಂದು ಉಡುಪಿಯಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅಬ್ಬಬ್ಬಾ ಕೆಲ ದಿನಗಳಿಂದ ಏನೇನೋ ಆಯ್ತು. ನೋವಾದವರು ನನ್ನನ್ನು ಕ್ಷಮಿಸಿಬಿಡಿ ಅಂದ್ರು.
ಅಜ್ಜನ ಮನೆಗೆ ಬಂದ ಮೊಮ್ಮಗ ನಾನು. ಬರೆದಂತೆ ಜೀವಿಸಿದವರು, ಜೀವಿಸಿದ್ದನ್ನು ಬರೆದವರು ಕಾರಂತರು. ಕಾರಂತರು ಅಘಾದವಾದ ಮರ. ಇಡೀ ಸಮಾಜದ ಸ್ವಾಸ್ತ್ಯಕ್ಕಾಗಿದ್ದ ಮರ. ಶಿವರಾಮ ಕಾರಂತರು ಕೈಗಾ ವಿರೋಧಿಯಾಗಿದ್ದರು. ಅವರಿಗೆ ಸುಳ್ಳು ಇಷ್ಟವಾಗ್ತಿರಲಿಲ್ಲ. ನಾನು ನಿಷ್ಠುರವಾಗಿ ಮಾತನಾಡಿದ್ರೆ ನನ್ನ ತಪ್ಪಲ್ಲ. ಕಾರಂತ, ತೇಜಸ್ವಿ, ಲಂಕೇಶರನ್ನು ಬೈಯ್ಯಿರಿ. ವಿರೋಧವಿದ್ದರೂ ಇಲ್ಲಿಗೆ ಬರಲು ಕಾರಣ ನೀವು. ಕಾರಂತರ ಅಭಿಮಾನಿಗಳಿಗಾಗಿ ಪ್ರಶಸ್ತಿ ಸ್ವೀಕರಿಸಿದೆ ಅಂತ ಹೇಳಿದ್ರು.
ಗೋಮಾಂಸ ತಿನ್ನುವವರು ತಿನ್ತಾರೆ, ಅಡ್ಡಿ ಮಾಡಬೇಡಿ. ಹಿಂಸೆ ಮಾಡದೆ ಕೊಲ್ಲಿ ಅಂದಿದ್ರು ಕಾರಂತರು. ವಿರೋಧದ ನಡುವೆಯೂ ನಾನು ಬರಲು ಕಾರಣ ಏನು ಗೊತ್ತಾ? ಅವರ ಊರಿನ ಸಂಭ್ರಮದಲ್ಲಿ ಭಾಗಿಯಾಗುವ ಆಸೆ. ಒಮ್ಮೆ ನಿರ್ಧಾರ ತಗೊಂಡ್ರೆ ನಾನು ಹಿಂದೆ ಸರಿಯಲ್ಲ. ಉಡುಪಿ ದಕ್ಷಿಣ ಕನ್ನಡದಲ್ಲಿ ಸಿಕ್ಕ ಸ್ವಾಗತ ನೋಡಿ ಸಂತೋಷವಾಗಿದೆ ಅಂದ್ರು.
ಕೆರೆಗಳ ಪುನರುಜ್ಜೀವನಕ್ಕೆ ಹೊರಟಿದ್ದೇನೆ. 10 ಜಲತಜ್ಞರನ್ನು ಸೇರಿಸಿ ಸಭೆಗಳು ಆಗಿದೆ. 3 ತಿಂಗಳಿಂದ ಕೆಲಸ ಕಾರ್ಯ ನಡೆಯುತ್ತಿದೆ. ನಾನು ಕಾರಣನಲ್ಲದಿದ್ದರೂ ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮಿಸಿ. ನಿಮ್ಮ ಪ್ರೀತಿಯ ಅಂತಃಕರಣ ಕಸಿವಿಸಿ ಮಾಡಿದ್ದರೆ ಕ್ಷಮಿಸಿ ಅಂದ್ರು.
ಕರಾವಳಿಯ ಜನ ವಿರೋಧಿಸಿದರು. ಕೆಲವರು ಅಪ್ಪಿಕೊಂಡು ಸ್ವಾಗತಿಸಿದರು. ವ್ಯವಸ್ಥಿತವಾಗಿ ಹೆದರಿಸುವ ಕೆಲಸ ನಡೆದಿದೆ. ಇದು ಬಹಳ ಅಪಾಯಕಾರಿ. ಎಂಡಪಂಥ- ಬಲಪಂಥದ ನಡುವೆ ನಾವು ಬದುಕುವ ಭಯ ಅಡಗಿದೆ. ನನ್ನ ಮಗಳಿಗೆ ಭಯ ಆವರಿಸಿದೆ. ವಾಕ್ ಸ್ವಾತಂತ್ರ್ಯ ಇಲ್ಲವಾಗಿ ಹೋಯ್ತಾ? ಮಾತಿಗೆ ಮಾತು ಉತ್ತರವಾಗಬೇಕು, ಕ್ರೌರ್ಯ- ಕೊಲೆ ಉತ್ತರವಲ್ಲ. ಬಾಯಿ ಮುಚ್ಚಿಸುವುದು ಕೊಲೆಯೇ ಅಲ್ಲವೇ? ಪರಿಸರಕ್ಕೆ ವಿರೋಧವಾಗದೆ ಮಾತನಾಡಿದರೆ ತಪ್ಪೇನು. ನಾನು ನನಗಾಗಿ ಮಾತನಾಡುತ್ತೇನೆ ಅಂತ ಪ್ರಕಾಶ್ ರೈ ಹೇಳಿದ್ರು.
ಉಡುಪಿಯ ಕುಂದಾಪುರದ ಕೋಟದಲ್ಲಿ ನಡೆದ ಸಮಾರಂಭದಲ್ಲಿ ಪ್ರಕಾಶ್ ರೈಗೆ ಕಾರಂತ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಹಾರ, ಹಣ್ಣು-ಹಂಪಲು, ಬೆಳ್ಳಿ ಫಲಕ ನೀಡಿ ಗೌರವ ನೀಡಲಾಯ್ತು. ಎಳನೀರು ಕುಡಿಯುತ್ತಾ ಡೈಲಾಗ್ ಹೊಡೆದ ಪ್ರಕಾಶ್ ರೈ, ಕಾರಂತರು ಸ್ಟ್ರಾ ಉಪಯೋಗಿಸ್ತಾ ಇರಲಿಲ್ಲ. ನಾನೂ ಕಾರಂತರ ಕ್ಷೇತ್ರದಲ್ಲಿ ಸ್ಟ್ರಾ ಉಪಯೋಗಿಸಲ್ಲ ಅಂದ್ರು.
ಕಾರಂತ ಥೀಂ ಪಾರ್ಕ್ಗೆ ಪ್ರಕಾಶ್ ರೈ ಆಗಮಿಸುತ್ತಿದ್ದಂತೆ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು ಪ್ರಕಾಶ್ ರೈಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ರು. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ರು. ಪೊಲೀಸರು ಸುಮಾರು 20 ಮಂದಿಯನ್ನ ಅರೆಸ್ಟ್ ಮಾಡಿದ್ರು. ಕಪ್ಪು ಅಂಗಿ ಧರಿಸಿ ಬಂದಿದ್ದ ವ್ಯಕ್ತಿಯನ್ನ ಗೇಟ್ ಬಳಿ ತಡೆದ ಪೊಲೀಸರು ಅಂಗಿ ತೆಗೆಸಿದ್ರು.