ತುಮಕೂರು: ಜಮೀನು ವಿವಾದ ಹಿನ್ನೆಲೆಯಲ್ಲಿ ಮಹಿಳೆಯೋರ್ವಳ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಆದಿನಾಯಕನಹಳ್ಳಿಯಲ್ಲಿ ಜರುಗಿದೆ.
ಅರುಣ್ ಕುಮಾರ್ ಹಾಗೂ ನಾಗಬಾಯಮ್ಮ ನಡುವೆ ಜಮೀನು ವಿವಾದ ಇತ್ತು. ಹಾಗಾಗಿ ಅರುಣ್ ಕುಮಾರ್ ಬೆಂಗಳೂರಿನಿಂದ ಪುಂಡ ಯುವಕರನ್ನು ಕರೆದುಕೊಂಡು ಬಂದು ವೃದ್ಧೆ ನಾಗಬಾಯಮ್ಮರ ವಿರುದ್ಧ ಛೂ ಬಿಟ್ಟಿದ್ದಾನೆ.
ಅದರಂತೆಯೇ ಮಚ್ಚು ಹಿಡಿದು ಯುವಕನೊರ್ವ ಕೊಲೆ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ ಅಶ್ಲೀಲ ಪದಗಳಿಂದ ನಿಂದಿಸಿದ್ದು, ಈ ವೇಳೆ ನಡೆದ ಘರ್ಷಣೆಯಲ್ಲಿ ನಾಗಬಾಯಮ್ಮರ ಮಗಳು ಸುಜಾತಾಗೆ ಗಾಯವಾಗಿದೆ. ಗಾಯಾಳು ಸುಜಾತಾ ಅವರನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಚ್ಚು ಹಿಡಿದು ಬೆದರಿಸಿದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಕುರಿತು ಹೊನ್ನವಳ್ಳಿ ಪೊಲೀಸರಿಗೆ ವಿಡಿಯೋ ಸಮೇತ ದೂರು ಕೊಟ್ಟಿದ್ದೇವೆ. ಆದರೆ ಅವರು ಕೊಲೆಯತ್ನ ಕೇಸ್ ಹಾಕದೇ ಕಾಟಾಚಾರದ ಎಫ್ಐಆರ್ ದಾಖಲು ಮಾಡಿದ್ದಾರೆ ಎಂದು ವೃದ್ಧೆ ಆರೋಪಿಸಿದ್ದಾರೆ.