ಬೆಂಗಳೂರು: ‘ವಿಶ್ವ ಯೋಗ ದಿನಾಚರಣೆ’ ಹಿನ್ನೆಲೆ ಬೆಂಗಳೂರಿನ ಮಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಂದನವನದ ನಟಿ ಅದಿತಿ ಪ್ರಭುದೇವ ತನ್ನ ಭಾವಿ ಪತಿ ಯಶಸ್ನೊಂದಿಗೆ ಬಂದಿದ್ದರು. ಅವರು ಯೋಗ ಮಾಡಿ ಯೋಗದ ಮಹತ್ವದ ಬಗ್ಗೆ ತಿಳಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯೋಗ ಒಂದು ಬ್ರಹ್ಮಾಂಡ. ಯೋಗದಿಂದ ದೇಹ, ಮನಸ್ಸು, ಆತ್ಮ, ಪರಮಾತ್ಮವನ್ನು ಒಟ್ಟಿಗೆ ಸೇರಿಸುತ್ತೆ. ನಮ್ಮನ್ನು ನಾವು ಅರಿತುಕೊಳ್ಳಲು ಯೋಗ ಸಹಾಯ ಮಾಡುತ್ತದೆ. ಯೋಗ ಅಭ್ಯಾಸದಿಂದ ಉತ್ತಮ ವ್ಯಕ್ತಿಯಾಗಿ ರೂಪುಕೊಳ್ಳಲು ಸಾಧ್ಯ. ಆದರೆ ಯೋಗಕ್ಕೆ ಒಂದು ಧರ್ಮದ ಹಣೆಪಟ್ಟಿ ಕಟ್ಟಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವ್ಯಾಸ ಯೋಗ ವಿವಿ ವಿಸಿ ಡಾ.ಬಿ.ಆರ್.ರಾಮಕೃಷ್ಣ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೀವನ ಶೈಲಿ ಸರಿಯಾಗಿ ನಡೆಸಿಕೊಂಡರೆ ಆರೋಗ್ಯದಲ್ಲಿ ಯಾವುದೇ ಕುಂದುಕೊರತೆಯಾಗುವುದಿಲ್ಲ. ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜೀವನ ಶೈಲಿ ರೂಪಿಸಬೇಕು. ಬಿಜೆಪಿ ಪಕ್ಷವನ್ನು ಬಲಗೊಳಿಸಬೇಕಾದರೆ ಯೋಗ ಮಾಡಬೇಕು ಎಂದು ಸಂದೇಶ ಕೊಟ್ಟರು. ಇದನ್ನೂ ಓದಿ: ಯೋಗದಿಂದ ವಿಶ್ವಕ್ಕೆ ಶಾಂತಿ – ಮೈಸೂರಿನಲ್ಲಿ 15 ಸಾವಿರ ಮಂದಿಯೊಂದಿಗೆ ಮೋದಿ ಯೋಗ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು. ಯೋಗ ಕುರಿತು ಮಾತನಾಡಿದ ಅವರು, ಮನಸ್ಸು, ಬುದ್ಧಿ, ಆತ್ಮದ ಏಕಾಗ್ರತೆ ಸಾಧಿಸಲು ಯೋಗದಿಂದ ಸಾಧ್ಯ. ಯೋಗ ಮಾಡಿದವರು ಹೇಗಿರುತ್ತಾರೆ ಎಂಬುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಉದಾಹರಣೆಯಾಗಿದ್ದಾರೆ. ಯೋಗ ಸುಂದರವಾದ ಆಧ್ಯಾತ್ಮದ ದಾರಿ ಎಂದು ತಿಳಿಸಿದರು.