– ಇಲ್ಲಿ ರಾಜ, ಸಾಮಾನ್ಯ ಜನ ಎಂಬುದಿಲ್ಲ.. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಂದೆ
– ಟಿಕೆಟ್ ಸಿಕ್ಕ ಬಳಿಕ ಬಿಜೆಪಿ ಕಚೇರಿಗೆ ರಾಜವಂಶಸ್ಥ ಮೊದಲ ಭೇಟಿ
ಬೆಂಗಳೂರು: ಪ್ರತಾಪ್ ಸಿಂಹ ಅವರು ಎರಡು ಬಾರಿ, 10 ವರ್ಷದಿಂದ ಸಂಸದರಾಗಿ ಕೆಲಸ ಮಾಡಿದ್ದಾರೆ. ಅವರು ಹಾಕಿಕೊಟ್ಟಿರುವ ಬುನಾದಿಯನ್ನು ನಾನು ಮುಂದುವರಿಸುತ್ತೇನೆ ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಲೋಕಸಭಾ ಚುನಾವಣೆಗೆ ಟಿಕೆಟ್ ಸಿಕ್ಕ ಬಳಿಕ ಮೊದಲ ಬಾರಿಗೆ ಗುರುವಾರ ಬಿಜೆಪಿ ಕಚೇರಿಗೆ ಯದುವೀರ್ ಭೇಟಿ ನೀಡಿದರು. ಕಚೇರಿಗೆ ಬರಮಾಡಿಕೊಂಡ ಕಾರ್ಯಕರ್ತರು ಆರತಿ ಬೆಳಗಿ ಸ್ವಾಗತ ಕೋರಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ತುಂಬಾ ಸಂತೋಷ ಇದೆ. ಕಳೆದ ಒಂದು ವರ್ಷದಿಂದ ರಾಜಕೀಯ ಚರ್ಚೆ ನಡೆಯುತ್ತಾ ಇತ್ತು. ಈಗ ಅದರ ಅವಕಾಶ ಸಿಕ್ಕಿದೆ. ಇಲ್ಲಿ ರಾಜ, ಸಾಮಾನ್ಯ ಜನ ಅನ್ನೋದಿಲ್ಲ. ಇದು ಪ್ರಜಾಪ್ರಭುತ್ವದ ವ್ಯವಸ್ಥೆ. ಇಲ್ಲಿ ಎಲ್ಲರೂ ಒಂದೇ ಎಂದು ಅಭಿಪ್ರಾಯಪಟ್ಟರು.
ನನಗೆ ಟಿಕೆಟ್ ಸಿಕ್ಕಿರುವುದಕ್ಕೆ ಪ್ರತಾಪ್ ಸಿಂಹ ಅವರ ವಿರೋಧ ಇಲ್ಲ. ಅವರು ಎರಡು ಬಾರಿ, ಹತ್ತು ವರ್ಷದಿಂದ ಕೆಲಸ ಮಾಡಿದ್ದಾರೆ. ಅವರು ಹಾಕಿಕೊಟ್ಟಿರೋ ಬುನಾದಿಯನ್ನು ನಾನು ಮುಂದುವರಿಸುತ್ತೇನೆ. ಪ್ರತಾಪ್ ಸಿಂಹ ಅವರ ಸಹಕಾರ ಇದ್ದೇ ಇದೆ. ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದೀನಿ. ನಿನ್ನೆಯೂ ಮಾತನಾಡಿದ್ದೇನೆ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡ್ತೀನಿ ಎಂದರು.
ಓಬಿಸಿಯಿಂದ ಯದುವೀರ್ ಟಿಕೆಟ್ ಪಡೆದಿರುವ ವಿಚಾರಕ್ಕೆ ಪ್ರತಾಪ್ ಸಿಂಹ ವ್ಯಂಗ್ಯ ಮಾಡಿ ಬಗ್ಗೆ ಪ್ರತಿಕ್ರಿಯಿಸಿ, ಆ ವಿಚಾರ ನನಗೆ ಗೊತ್ತಿಲ್ಲ. ನನಗೆ ಯಾವುದೇ ಭೇದ-ಭಾವ ಇಲ್ಲ. ಪಕ್ಷಕ್ಕೆ ದುಡಿಯುತ್ತೇನೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಕಳೆದ 10 ವರ್ಷದಲ್ಲಿ ಪ್ರತಾಪ್ ಸಿಂಹ ಉತ್ತಮ ಕೆಲಸ ಮಾಡಿದ್ದಾರೆ. ಅಭಿವೃದ್ಧಿಗೆ ಅಡಿಪಾಯ ಹಾಕಿದ್ದಾರೆ. ಅವರ ಸಲಹೆ, ಸಹಕಾರ ಇದ್ರೆ ಅನುಕೂಲ ಆಗುತ್ತೆ. ಅಧಿಕಾರ ಇದ್ರೆ ಜನರಿಗೆ ಉತ್ತಮ ಸೇವೆ ಸಲ್ಲಿಸಬಹುದು. ಪ್ರತಾಪ್ ಸಿಂಹ ಮೈಸೂರಿಗೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಪ್ರತಾಪ್ ಸಿಂಹ ಜೊತೆ ನಾನು ಸಂಪರ್ಕದಲ್ಲಿದ್ದೇನೆ ಎಂದು ಮಾತನಾಡಿದರು.
9 ವರ್ಷಗಳ ಕಾಲ ಅರಮನೆಯ ಜವಾಬ್ದಾರಿ ಹೊತ್ತು ಜನರ ಜೊತೆ ಬೆರೆತಿದ್ದೇನೆ. ಸಹೋದರನಂತೆ ನನ್ನನ್ನು ಪ್ರೀತಿಸಿದ್ದಾರೆ. ಅವರ ಋಣ ತೀರಿಸುವ ಸಮಯ ಬಂದಿದೆ. ರಾಜಕೀಯದ ಬಗ್ಗೆ ಒಂದು ವರ್ಷದಿಂದ ಮನಸು ಮಾಡಿದ್ದೆ. ಸಾರ್ವಜನಿಕರ ಸೇವೆಗೆ ಅವಕಾಶ ಇದು. ಅಧಿಕಾರ ಇದ್ದರೆ ಅಭಿವೃದ್ಧಿ ಮಾಡಬಹುದು. ಪ್ರತಾಪ್ ನನ್ನ ಜೊತೆ ಮಾತಾನಾಡುವಾಗ, ಬೆಂಬಲವಾಗಿ ನಿಲ್ಲುತ್ತೇನೆ ಅಂತಾ ಹೇಳಿದ್ದಾರೆ. ಅದನ್ನೇ ಸಂದೇಶ ಅಂದುಕೊಳ್ಳುವೆ ಎಂದರಲ್ಲದೇ, ಪ್ರತಾಪ್ ಬೆಂಬಲಿಗರ ಪ್ರತಿಭಟನೆ ಒಳ ಏಟು ಕೊಡಬಹುದಾ ಎನ್ನುವ ಪ್ರಶ್ನೆಗೆ ಇಲ್ಲ ಎಂದರು. ಎಲ್ಲರೂ ನನ್ನನ್ನು ಸಹೋದರ, ಮಗನಂತೆ ಕಂಡಿದ್ದಾರೆ ಎಂದು ತಿಳಿಸಿದರು.