ನವದೆಹಲಿ: ಉತ್ತರಖಂಡದಲ್ಲಿ (Uttarakhand) ನಿರ್ಮಾಣ ಹಂತದ ಸುರಂಗ (Tunnel) ಕುಸಿತದಿಂದ ಕಳೆದ ಏಳು ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ನಾಲ್ಕೈದು ದಿನಗಳಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಇದರ ನಡುವೆ ದೀರ್ಘಾವಧಿಯಿಂದ ಸಿಲುಕಿರುವ ಕಾರ್ಮಿಕರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ವಿಟಮಿನ್ ಮಾತ್ರೆಗಳು, ಖಿನ್ನತೆ ನಿವಾರಕ ಔಷಧಗಳು ಹಾಗೂ ಡ್ರೈ ಫ್ರೂಟ್ನ್ನು ಪೈಪ್ಗಳ ಮೂಲಕ ಸರಬರಾಜು ಮಾಡಲಾಗಿದೆ. ಇದನ್ನೂ ಓದಿ: ಕಾಮಗಾರಿ ವೇಳೆ ಭೂಕುಸಿತ- ಸುರಂಗದಡಿ ಸಿಲುಕಿದ 36 ಕಾರ್ಮಿಕರು
ಅದೃಷ್ಟವಶಾತ್ ಸುರಂಗದ ಒಳಗೆ ವಿದ್ಯುತ್ ಆನ್ ಇದ್ದು, ಬೆಳಕಿದೆ. ಅಲ್ಲದೇ ಕುಡಿಯಲು ನೀರಿನ ವ್ಯವಸ್ಥೆ ಇದೆ. ಇಂದಿನಿಂದ ಬೆಟ್ಟದ ತುದಿಯಿಂದ ಲಂಬವಾಗಿ ರಂದ್ರ ಕೊರೆಯಲಾಗುತ್ತಿದೆ. ಇದಕ್ಕಾಗಿ ಮಧ್ಯಪ್ರದೇಶದ ಇಂದೋರ್ನಿಂದ ಹೆಚ್ಚಿನ ಕಾರ್ಯಕ್ಷಮತೆಯ ಡ್ರಿಲ್ಲಿಂಗ್ ಯಂತ್ರವನ್ನು ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಅಧಿಕಾರಿಗಳ ತಂಡ ಮತ್ತು ತಜ್ಞರ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಸಿಲುಕಿರುವ ಕಾರ್ಮಿಕರನ್ನು ಸಾಧ್ಯವಾದಷ್ಟು ಬೇಗ ತಲುಪಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಿಯ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ ತಿಳಿಸಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಸ್ಥಳಕ್ಕೆ ಭೇಟಿ ನೀಡಿ, ಅವಶೇಷಗಳ ಅಡಿ ಸಿಲುಕಿರುವ ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.
ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾದಿಂದ ದಾಂಡಲ್ಗಾಂವ್ಗೆ ಸಂಪರ್ಕಿಸುವ ಸುರಂಗದಲ್ಲಿ ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸುರಂಗದಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಫೈನಲ್ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಪ್ಯಾಲೆಸ್ತೀನ್ ಬೆಂಬಲಿಗ ಅರೆಸ್ಟ್