ಯಾದಗಿರಿ: ಬಾಣಂತಿ ಮಹಿಳೆ ಹೊಟ್ಟೆ ನೋವಿನಿಂದ ಒಂದು ಗಂಟೆಕ್ಕೂ ಹೆಚ್ಚು ಕಾಲ ನರಳಾಡಿದ ಘಟನೆ ಯಾದಗಿರಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
108 ಆಂಬುಲೆನ್ಸ್ ಗೆ ಕರೆ ಮಾಡಿದರೂ ಸಕಾಲಕ್ಕೆ ಆಗಮಿಸದ ಕಾರಣ ಬಾಣಂತಿಗೆ ತೀವ್ರವಾಗಿ ರಕ್ತಸ್ರಾವವಾಗಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹುಲಕಲ್ ಮೂಲದ ಶಾಂತಮ್ಮ ಎಂಬವರು ಸೋಮವಾರ ಬೆಳಗ್ಗೆ ತೆಲಂಗಾಣದ ಕೃಷ್ಣಾದಲ್ಲಿ ಗಂಡು ಮಗುವಿಗೆ ಜನ್ಮ ನೀಡಿ ನಂತರ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದ ಕಾರಣ ಬಾಣಂತಿ, ಮಗು ಸಮೇತ ಯಾದಗಿರಿಗೆ ರೈಲ್ವೇ ಮೂಲಕ ಆಗಮಿಸುತ್ತಿರುವಾಗ ತೀವ್ರವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಶಾಂತಮ್ಮ ಯಾದಗಿರಿ ರೈಲ್ವೇ ನಿಲ್ದಾಣದಲ್ಲಿ ಹೊಟ್ಟೆ ನೋವಿನಿಂದ ನರಳಾಡಿದ್ದಾರೆ.
ರೈಲ್ವೇ ಪೊಲೀಸರು ಹಾಗೂ ಸ್ಥಳೀಯ ಜನರು ವ್ಹೀಲ್ ಚೇರ್ ಹಾಗೂ ಸ್ಟ್ರೇಚರ್ ಮೂಲಕ ರಕ್ಷಿಸಿದರು. ಇಷ್ಟೆಲ್ಲ ನಡೆದ ಬಳಿಕ ಆಗಮಿಸಿದ 108 ಆಂಬುಲೆನ್ಸ್ ಬಂದಿದೆ. ಸದ್ಯ ತಾಯಿ ಮಗು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ.