ನವದೆಹಲಿ: ವಿಚ್ಛೇದನ ನೀಡಲು ನಿರಾಕರಿಸಿದ ಪತಿಯನ್ನು ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ರೂಪೇಶ್ ಸಿಂಗ್ ಚಾಂಡೇಲ್ ಎಂದು ಗುರುತಿಸಲಾಗಿದೆ. ರೂಪೇಶ್ನ ಪತ್ನಿ ಅಮೃತಾ ಓಂವೀರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದ್ದರಿಂದ ಪತಿಗೆ ವಿಚ್ಛೇದನ ಕೊಡುವಂತೆ ಒತ್ತಾಯಿಸುತ್ತಿದ್ದಳು. ಆದ್ರೆ ಪತಿ ವಿಚ್ಛೇದನ ನೀಡಲು ನಿರಾಕರಿಸಿದ್ದಾನೆ. ಈ ವಿಚಾರಕ್ಕೆ ಪತ್ನಿಗೆ ಸಿಟ್ಟು ನೆತ್ತಿಗೇರಿದ್ದು, ತಮ್ಮ ಪ್ರೀತಿಗೆ ಅಡ್ಡಿಯಾಗಿರುವ ಪತಿಗೆ ಒಂದು ಗತಿ ಕಾಣಿಸಬೇಕು ಎಂದು ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾಳೆ.
ಅಲ್ಲದೆ ಪತಿಯನ್ನು ಕೊಲ್ಲಲು ಗೆಳೆಯ ಓಂವೀರ್ ಗೆ ಅಮೃತಾ 3 ಲಕ್ಷ ರೂ. ಹಣವನ್ನೂ ಕೂಡ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಓಂವೀರ್ ಹಾಗೂ ಇನ್ನಿಬ್ಬರು ಸೇರಿಕೊಂಡು ಏ.28ರಂದು ನೋಯ್ಡಾದ ಗೌರ್ ಪ್ರದೇಶದ ಬಳಿ ರೂಪೇಶ್ನ ಕಾರನ್ನು ಅಡ್ಡಗಟ್ಟಿ ಶೂಟ್ ಮಾಡಿ ಕಲೆ ಮಾಡಿ ಎಸ್ಕೇಪ್ ಆಗಿದ್ದರು. ಆದರೆ ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಂಗಳವಾರದಂದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದ್ರೆ ಪತ್ನಿ ಮಾತ್ರ ವಿಷಯ ತಿಳಿಯುತ್ತಿದ್ದಂತೆ ಅಭರಣಗಳ ಜೊತೆ ಪೊಲೀಸರ ಕಣ್ತಪ್ಪಿಸಿ ನಾಪತ್ತೆಯಾಗಿದ್ದಾಳೆ.
ಆರೋಪಿಗಳನ್ನು ವಿಚಾರಣೆ ನಡೆಸಿದಾಗ ರೂಪೇಶ್ನನ್ನು ಕೊಲ್ಲಲು ಆತನ ಪತ್ನಿಯೇ ಹಣ ನೀಡಿದ್ದಳು ಹಾಗೂ ತಾವಿಬ್ಬರು ಪ್ರೀತಿಸುತ್ತಿದ್ದೆವು ಎಂದು ಓಂವೀರ್ ಒಪ್ಪಿಕೊಂಡಿದ್ದಾನೆ. ತಮ್ಮ ಪ್ರೀತಿಗೆ ರೂಪೇಶ್ ಅಡ್ಡ ಬಂದಿದಕ್ಕೆ ಆತನನ್ನು ಕೊಲ್ಲಲು ಮುಂದಾದೆವು ಎಂದು ಬಾಯ್ಬಿಟ್ಟಿದ್ದಾನೆ.