ಲಕ್ನೋ: ತಲಾಖ್ ನೀಡಿದ್ದಕ್ಕೆ ರೊಚ್ಚಿಗೆದ್ದ ಪತಿ ಅನ್ನ ನೀರು ನೀಡದೇ ಪತ್ನಿಯನ್ನು ಕೊಲೆ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ರಜೀಯಾ ಮೃತ ದುರ್ದೈವಿ ನಹಿಮ್ ಕೂಡಿ ಹಾಕಿದ್ದ ಪತಿ. ದಂಪತಿಗೆ 6 ವರ್ಷದ ಮಗುವಿದೆ. ರಜೀಯಾ ಅವರನ್ನು ಕೂಡಿ ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ರಕ್ಷಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಜೀಯಾ ಅವರು ಮಂಗಳವಾರ ಮೃತ ಪಟ್ಟಿದ್ದಾರೆ.
ರಜೀಯಾ ಅವರ ಪತಿ ನಹಿಮ್ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಪತಿಯ ವರ್ತನೆಯಿಂದ ಬೇಸತ್ತ ರಜೀಯಾ ತ್ರಿವಳಿ ತಲಾಖ್ ನೀಡಿದ್ದರು. ಇದರಿಂದ ಕೋಪಗೊಂಡ ನಹಿಮ್ ರಜೀಯಾ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದ. ಅಷ್ಟೇ ಅಲ್ಲದೆ ಆಕೆಗೆ ಅನ್ನ ನೀರು ಕೊಡುತ್ತಿರಲಿಲ್ಲ ಎಂದು ರಜೀಯಾ ಸಹೋದರಿ ದೂರಿದ್ದಾರೆ.
ರಜೀಯಾ ಅವರನ್ನು ನೋಡಲು ಮನೆಗೆ ಹೋದಾಗ ಪತಿಯ ಕೃತ್ಯ ಬೆಳಕಿಗೆ ಬಂದಿದ್ದು, ತಕ್ಷಣವೇ ರಜೀಯಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ನಹಿಮ್ ವಿರುದ್ಧ ಪ್ರಕರಣ ದಾಖಲಿಸಲು ಠಾಣೆಗೆ ಹೋಗಿದ್ದೇವು. ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಅವರು ಆರೋಪಿಸಿದರು.
ನಹಿಮ್ ತನ್ನ ಮೊದಲ ಪತ್ನಿಗೂ ವರದಕ್ಷಣೆ ತರುವಂತೆ ಕಿರುಕುಳ ನೀಡುತ್ತಿದ್ದ. ಇದರಿಂದಾಗಿ ಅವರು ವಿಚ್ಛೇದನ ಪಡೆದು ಬೆರೆಯಾಗಿದ್ದರು ಎಂದು ಮೇರಾ ಹಕ್ ಎನ್ಜಿಓ ಸಂಸ್ಥಾಪಕಿ ಫರ್ಹಾತ್ ನಖ್ವಿ ತಿಳಿಸಿದರು.
ರಜೀಯಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಲಕ್ನೋಗೆ ಕಳುಹಿಸಲಾಗಿತ್ತು. ಆದರೆ ರಜೀಯಾ ಅವರ ಸ್ಥಿತಿ ಗಂಭೀರವಾಗಿತ್ತು ಹೀಗಾಗಿ ಮೃತಪಟ್ಟಿದ್ದಾರೆ ಎಂದು ಫರ್ಹಾತ್ ನಖ್ವಿ ವಿವರಿಸಿದರು.