ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದಿರಾನಗರ (Indira Nagar) ಪೊಲೀಸ್ ಠಾಣಾ ವ್ಯಾಪ್ತಿಯ ದೂಪನಹಳ್ಳಿ ಬಳಿ ನಡೆದಿದೆ.
22 ವರ್ಷದ ಪ್ರೇರಣ ಮೃತ ಗೃಹಿಣಿ. ಕಳೆದ ಒಂದು ವರ್ಷದ ಹಿಂದಷ್ಟೇ ವಿನಯ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದರು. ಪತಿ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದು, ಪ್ರೇರಣ ಸದ್ಯ ಬಿಎಸ್ಸಿ ಪದವಿ ಓದುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ನ್ಯಾಯಾಧೀಶೆ ಕಾರು ತಡೆದು ಗಲಾಟೆ – ಮೂವರು ಅರೆಸ್ಟ್
ಮದುವೆಯಾದ ಮೇಲೂ ನಾವೇ ಕಾಲೇಜಿಗೆ ಕಳಿಸಿ ಓದಿಸುತ್ತೇವೆ ಎಂದು ವಿನಯ್ ಹಾಗೂ ಆತನ ಕುಟುಂಬಸ್ಥರು ನಂಬಿಸಿದ್ದರು. ಆದರೆ ಈ ವರ್ಷ ಪ್ರೇರಣ ಬಿ.ಎಸ್ಸಿ ಶಿಕ್ಷಣ ಮುಗಿಸುತ್ತಿದ್ದಂತೆ ಬೇರೆಯದೇ ರಾಗ ಹಾಡಲು ಶುರು ಮಾಡಿದ್ದರು. ಅಲ್ಲದೇ ಪತಿ ವಿನಯ್ ಹೆಂಡತಿಯ ಮೇಲೆ ಅತಿಯಾದ ಅನುಮಾನ ಪಡುತ್ತಿದ್ದ. ಕಳೆದ 2 ತಿಂಗಳ ಹಿಂದೆ ತೀವ್ರ ಗಲಾಟೆ ಮಾಡಿಕೊಂಡು ಪ್ರೇರಣಾ ತವರು ಮನೆಗೆ ಬಂದಿದ್ದರು. ಆಗ ದೊಡ್ಡವರೆಲ್ಲಾ ಸೇರಿ ಪಂಚಾಯತಿ ಮಾಡಿ, ಸಮಾಧಾನ ಹೇಳಿ ಮತ್ತೆ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಇದರ ಜೊತೆಗೆ ಮಗು ಮಾಡಿಕೋ ಅಂತ ಸದಾ ಕಿರುಕುಳ ನೀಡಲಾಗುತ್ತಿತ್ತು ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಇಂದು (ಜು.24) ಬೆಳಗಿನ ಜಾವ ಎಲ್ಲರೂ ಮನೆಯಲ್ಲೇ ಇದ್ದಾಗ, ಬಚ್ಚಲು ಮನೆಗೆ ತೆರಳಿದ್ದ ಪ್ರೇರಣಾ ನೇಣಿಗೆ ಶರಣಾಗಿದ್ದಾಳೆ. ಕೂಡಲೇ ಆಕೆಯನ್ನು ಇಂದಿರಾ ನಗರದ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದರು.
ಈ ಸಂಬಂಧ ಇಂದಿರಾನಗರ ಪೊಲೀಸ್ (Indira Nagar Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಕೀಟನಾಶಕ ತಯಾರಿ – ಕೃಷಿ ಅಧಿಕಾರಿಗಳ ದಾಳಿ

