ನೆಲಮಂಗಲ: ಬೆಂಗಳೂರು ಹೊರವಲಯದ ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸೂಟ್ಕೇಸ್ ಒಂದು ತೇಲಿ ಬಂದಿದ್ದು, ಅದರಲ್ಲಿ ಮಹಿಳೆಯೊಬ್ಬಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹೊನ್ನೇನಹಳ್ಳಿಯ ಕೆರೆಯಲ್ಲಿ ತೇಲಿಬಂದ ಸೂಟ್ಕೇಸ್ ನೋಡಿ ಆತಂಕಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸೂಟ್ಕೇಸ್ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಸೂಟ್ಕೇಸ್ನಲ್ಲಿ ಅಪರಿಚಿತ ಮಹಿಳೆ ಮೃತ ದೇಹ ಪತ್ತೆಯಾಗಿದೆ. ಇದನ್ನೂ ಓದಿ: ಪೊಲೀಸ್ ಇಲಾಖೆ ಸಿಬ್ಬಂದಿ ವಿರುದ್ಧ ಪೋಸ್ಟ್ – ಕಾನ್ಸ್ಟೇಬಲ್ ಅಮಾನತು
ಈ ಮೃತದೇಹವು ಸುಮಾರು 23 ರಿಂದ 30 ವರ್ಷ ವಯಸ್ಸಿನ ಮಹಿಳೆಯದಾಗಿರಬಹುದು ಎಂದು ಅಂದಾಜಿಸಲಾಗಿದೆ. ಬೇರೆಡೆ ಕೊಲೆ ಮಾಡಿ ಶವ ತಂದು ಕೆರೆಗೆ ಎಸೆದಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಕೋನವಂಶಿ ಕೃಷ್ಣ, ನೆಲಮಂಗಲ ಡಿವೈಎಸ್ಪಿ ಗೌತಮ್, ಸಿಪಿಐ ರಾಜೀವ್ ಪಿಎಸ್ಐ ಮುರುಳಿ ಸೇರಿದಂತೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಡಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯ ಪತ್ತೆ ಕಾರ್ಯ ಹಾಗೂ ಕೊಲೆ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆ ಮೇಲೆ ದಾಳಿಗೆ ಯೋಜಿಸಿದ್ದ ಮೂವರು ಉಗ್ರರ ಹತ್ಯೆ