ಮೈಸೂರು: ಶಾಸಕರಲ್ಲದಿದ್ದರೂ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಇದೀಗ ಅವರು ಇಷ್ಟೊಂದು ಪವರ್ ಫುಲ್ ಆಗಿದ್ದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ.
ಲಿಂಗಾಯತ ಸಿಎಂ ಇದ್ದರೂ ಅದೇ ಸಮುದಾಯದ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಹೈಕಮಾಂಡ್ನಿಂದ ಲಕ್ಷ್ಮಣ ಸವದಿಗೆ ದೊಡ್ಡ ಶ್ರೀ ರಕ್ಷೆ ಇದೆ. ಇದಕ್ಕೆ ಕಾರಣ ಮುಂಬರುವ ಮಹಾರಾಷ್ಟ್ರ ಚುನಾವಣೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೂ ಸವದಿ ಅನಿವಾರ್ಯವಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.
ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ, ಪುಣೆ ಹೀಗೆ ಕೆಲ ಭಾಗಗಳಲ್ಲಿ ಲಕ್ಷ್ಮಣ ಸವದಿ ಹವಾ ಜೋರಿದೆ. ಈ ಭಾಗದಲ್ಲಿ ಬಿಜೆಪಿ ಗೆ ದೊಡ್ಡ ಶಕ್ತಿ ಇಲ್ಲ. ಲಕ್ಷ್ಮಣ ಸವದಿ ಇದ್ದರೆ ಕೆಲ ಭಾಗಗಳಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ. ಇದನ್ನು ಬಿಜೆಪಿ ಹೈಕಮಾಂಡ್ ಗೆ ಮಹಾರಾಷ್ಟ್ರ ಬಿಜೆಪಿ ಸಂಘಟನೆ ಮನವರಿಕೆ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಸವದಿ ಹೆಸರು ಸೂಚಿಸುವ ಮೂಲಕ ಕರ್ನಾಟಕದ ಬಿಜೆಪಿ ನಾಯಕರೇ ಶಾಕ್ ಆಗುವಂತೆ ಮಾಡಿದೆ.
ಮಹಾರಾಷ್ಟ್ರ ವಿಧಾನಸಭೆಗೆ ಅಕ್ಟೋಬರ್ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾವಣೆ ಮುಗಿಯೋವರೆಗೂ ಲಕ್ಷ್ಮಣ ಸವದಿಯನ್ನು ಸಂಪುಟದಲ್ಲಿ ಉಳಿಸಿಕೊಳ್ಳಲೇ ಬೇಕು ಎಂದು ಹೈಕಮಾಂಡ್ ತಾಕೀತು ಮಾಡಿದೆ. ಅನರ್ಹ ಶಾಸಕ ಮಹೇಶ್ ಕುಮಟಹಳ್ಳಿಗೆ ಇದನ್ನು ಹೇಳಿ ಅಸಮಾಧಾನ ಸರಿಪಡಿಸಿ ಎಂದು ಕರ್ನಾಟಕದ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.
ಇತ್ತ ಶ್ರೀರಾಮುಲು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಶ್ರೀರಾಮುಲು ಒಬ್ಬರೇ ಡಿಸಿಎಂ ಹುದ್ದೆ ಬೇಡಿದ್ದರು. ಆದರೆ ಡಿಸಿಎಂ ಪಟ್ಟ ಕೇಳದವರಿಗೆ ನೀಡಲಾಗಿದೆ. 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶ್ರೀರಾಮುಲು ಪ್ರಚಾರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಶ್ರೀರಾಮುಲು ಅವರೇ ದಯಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇವಲ ಶಾಸಕರಾಗಿರಿ. ಇಡೀ ವಾಲ್ಮೀಕಿ, ಎಸ್ಸಿ, ಎಸ್ಟಿ, ಓಬಿಸಿ ಸಮುದಾಯ ನಿಮ್ಮ ಬೆಂಬಲಕ್ಕಿದೆ ಎಂದು ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದಾರೆ.