-ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮೇಲೆ ಶಂಕೆ
ಕೋಲ್ಕತ್ತಾ: ಲೋಕಸಭಾ ಚುನಾವಣೆ ಮುಗಿದು ಕೇಂದ್ರದಲ್ಲಿ ಸರ್ಕಾರ ರಚನೆಯಾಗಿ ವಾರಗಳೇ ಕಳೆದಿವೆ. ಚುನಾವಣೆಯ ಸಮಯಲ್ಲಿ ರಾಜಕೀಯ ಸಂಘರ್ಷದ ಕಿಡಿ ಇನ್ನೂ ತಣ್ಣಗಾಗಿಲ್ಲ. ಬಿಜೆಪಿ ಮತ್ತು ಟಿಎಂಸಿ (ತೃಣಮೂಲ ಕಾಂಗ್ರೆಸ್) ಕಾರ್ಯಕರ್ತರ ನಡುವಿನ ಗಲಾಟೆಗಳು ಕೊಲೆಯಲ್ಲಿ ಅಂತ್ಯಗೊಳ್ಳುತ್ತಿವೆ. ಮನೆಯ ಮೇಲೆ ಬಾಂಬ್ ಎಸೆದು, ಗುಂಡಿಟ್ಟು ಟಿಎಂಸಿಯ ಮೂವರು ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಕೊಲೆ ನಡೆದಿದೆ. ಮೃತರನ್ನು ಖೈರೂದ್ದೀನ್ ಖಾನ್ ಮತ್ತು ಸೋಹೆಲ್ ಖಾನ್ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಕಾರ್ಯಕರ್ತನ ಗುರುತು ಪತ್ತೆಯಾಗಿಲ್ಲ. ಓರ್ವನನ್ನು ಕಾಂಗ್ರೆಸ್ ನವರು ಮತ್ತಿಬ್ಬರನ್ನು ಬಿಜೆಪಿ ಬೆಂಬಲಿಗರು ಕೊಲೆ ಮಾಡಿದ್ದಾರೆ ಎಂದು ಟಿಎಂಸಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಮೃತ ಕುಟುಂಬಸ್ಥರ ಸಂಬಂಧಿ ಮಾತನಾಡಿ, ಆರೋಪಿಗಳು ಈಗಾಗಲೇ ಕೊಲೆ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಆ ಪ್ರಕರಣದಲ್ಲಿ ನಾನು ಸಾಕ್ಷಿಯಾಗಿದ್ದರಿಂದ ನನ್ನನ್ನು ಹುಡುಕಿಕೊಂಡು ಮನೆಗೆ ಬಂದಿದ್ದಾರೆ. ಮನೆಯಲ್ಲಿ ನಾನು ಸಿಗದಿದ್ದಾಗ, ಇವರನ್ನು ಕೊಲೆ ಮಾಡಿದ್ದಾರೆ. ಗ್ರಾಮದಲ್ಲಿ ಹುಡುಕಾಟ ನಡೆಸಿದ್ದು, ಆರೋಪಿಗಳೆಲ್ಲ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆಂದು ಕಣ್ಣೀರು ಹಾಕಿದರು.