ಹಾಸನ: ಚಿಕ್ಕಮಗಳೂರಿನಲ್ಲಿ ನಾನು ಹಾಗೂ ಹಾಸನದಲ್ಲಿ ಪ್ರೀತಂಗೌಡ ಕೆಲಸ ಮಾಡಿಯೂ ರಾಜಕೀಯ ಪಿತೂರಿಗೆ ಬಲಿಯಾಗಿದ್ದೇವೆ ಎಂದು ಮಾಜಿ ಸಚಿವ ಸಿ.ಟಿ.ರವಿ (C.T. Ravi) ಹೇಳಿದ್ದಾರೆ.
ಹಾಸನ ನಗರದ ಸೀತಾರಾಮಾಂಜನೇಯ ಸಭಾಭವನದಲ್ಲಿ ನಡೆದ ಬಿಜೆಪಿ (BJP) ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ನಮ್ಮನ್ನು ಕೆಲಸ ಮಾಡಿಲ್ಲ ಎಂದು ಯಾರೂ ದೂರುವುದಿಲ್ಲ. ಆದರೂ ನಾವಿಬ್ಬರೂ ರಾಜಕೀಯ ಪಿತೂರಿಗೆ ಬಲಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಹೃದಯದಲ್ಲಿ ಟಿಪ್ಪು ಇದ್ದಾನೆ, ಅದಕ್ಕೆ ನಾಮ ಇಟ್ಟುಕೊಳ್ಳಲ್ಲ: ಆರ್.ಅಶೋಕ್
ಚಿಕ್ಕಮಗಳೂರಿನಲ್ಲಿ ಜೆಡಿಎಸ್ 2018ರ ಚುನಾವಣೆಯಲ್ಲಿ 40 ಸಾವಿರ ವೋಟು ಪಡೆದಿತ್ತು. ಕಳೆದ ಚುನಾವಣೆಯಲ್ಲಿ ಕೇವಲ 1700 ವೋಟು ಪಡೆದಿದೆ. ಹಾಗೆಯೇ ಹಾಸನದಲ್ಲಿ ಕಾಂಗ್ರೆಸ್ (Congress) ಅಂದು 38 ಸಾವಿರ ಮತ ಪಡೆದಿತ್ತು. ಈಗ 4 ಸಾವಿರ ಮತ ಮಾತ್ರ ಗಳಿಸಿದೆ. ಹೀಗಾಗಿ ರಾಜಕೀಯ ಪಿತೂರಿ ಹೇಗೆ ನಡೆದಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಸಂಬಂಧ ಕೆಡಬಾರದು ಎಂದು ನಾವು ವಿಷಕಂಠರಾಗಿದ್ದೇವೆ ಎಂದು ಪರೋಕ್ಷವಾಗಿ ಜೆಡಿಎಸ್ ವಿರುದ್ಧವೂ ಅಸಮಾಧಾನ ಹೊರ ಹಾಕಿದ್ದಾರೆ.
ಈಗಲೇ ಎಲ್ಲವನ್ನೂ ಬಿಡಿಸಿ ಹೇಳಲು ಆಗುವುದಿಲ್ಲ. ಎಲ್ಲಿ, ಏನು, ಹೇಗೆ, ಪಿತೂರಿ ನಡೆಯಿತು ಎಂದು ಗೊತ್ತು. ಎಲ್ಲವನ್ನೂ ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದೇವೆ. ನಾವು ಅಷ್ಟು ಅಮಾಯಕರಲ್ಲ. ನಾವು ತತ್ವದ ಮೇಲೆ ನಂಬಿಕೆ ಇಟ್ಟವರು. ನಾನು ದೇಶ ಮೊದಲು ಎಂದು ಕೆಲಸ ಮಾಡ್ತಿದ್ದೇನೆ. ಮೋದಿ ಅವರ ಚಿತ್ರ ಕಣ್ಮುಂದೆ ಬರಬೇಕು. ಆ ಕಾರಣಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ ಎಂದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರು ಹಾಸನ ಸೇರಿದಂತೆ ಎಲ್ಲೆಡೆ ಮಾಡಿರುವ ಕೆಲಸ ಕಾರ್ಯಗಳನ್ನು ಜನತೆಗೆ ಮುಟ್ಟಿಸುವ ಮೂಲಕ ಬಿಜೆಪಿ ಗೆಲ್ಲಲು ಪ್ರತಿಯೊಬ್ಬರೂ ಶ್ರಮಿಸಬೇಕು. ಬಿಜೆಪಿ ಏನೂ ಮಾಡಿಲ್ಲ ಎನ್ನುವವರಿಗೆ ನಮೋ ಅವರ ಒಳ್ಳೆಯ ಕೆಲಸ, ಕಾರ್ಯಗಳನ್ನು ಮನದಟ್ಟು ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯದ ಹಿತಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ: ಡಿಕೆ ಸುರೇಶ್