– ಆಸ್ಪತ್ರೆಗೆ ಬಿಎಸ್ ಯಡಿಯೂರಪ್ಪ ಭೇಟಿ
ಬೆಂಗಳೂರು: ಪಾರ್ವತಮ್ಮ ರಾಜ್ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರ ಆರೋಗ್ಯದ ಬಗ್ಗೆ ಮುಚ್ಚಿಡುವ ಅಗತ್ಯ ನಮಗಿಲ್ಲ. ಆದ್ರೆ ದಯವಿಟ್ಟು ಸುಳ್ಳು ಸುದ್ದಿ ಹರಡಿಸಬೇಡಿ ಅಂತಾ ನಟ ಶಿವರಾಜ್ ಕುಮಾರ್ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.
ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊನ್ನೇ ತಾನೇ ಉಸಿರಾಟದ ತೊಂದರೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ಪಾರ್ವತಮ್ಮ ಅವರಿಗೆ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟಕ್ಕೆ ಅವಕಾಶಕೊಡಲಾಗಿತ್ತು. ಅಲ್ಲದೇ ಡಯಾಲಿಸಿಸ್ ನಿಲ್ಲಿಸಲಾಗಿದೆ. ಅವರ ಆರೋಗ್ಯದಲ್ಲಿ ಗುಣಮುಖರಾಗೋ ಲಕ್ಷಣ ಕಂಡುಬಂದಿದೆ ಅಂತಾ ಅವರು ಹೇಳಿದ್ದಾರೆ.
ಅಮ್ಮನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಡಬೇಡಿ. ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾದ್ರೆ ಖಂಡಿತಾ ನಿಮಗೆ ತಿಳಿಸುತ್ತೇವೆ. ಯಾಕಂದ್ರೆ ಏನೇನೊ ಮೆಸೇಜ್ ಗಳು ಹರಿದಾಡುತ್ತಿವೆ. ಹಾಗಂತ ಒಂದು ವೇಳೆ ಆಗಿದ್ರೆ ನಾವು ಇಂದು ಈ ರೀತಿ ಇರ್ತಿದ್ವಾ?. ಸುಮ್ನೆ ಇಂತಹ ವಿಷಯಗಳಲ್ಲಿ ಹುಡುಗಾಟ ಆಡಕ್ಕಾಗಲ್ಲ. ಅಮ್ಮನ ಆರೋಗ್ಯದ ಬಗ್ಗೆ ಜನಗಳ ಮುಂದೆ ಮುಚ್ಚುಮರೆ ಮಾಡೋ ಅಗತ್ಯವಿಲ್ಲ. ಯಾಕಂದ್ರೆ ಅಪ್ಪಾಜೀನೇ ನಿಮ್ಮ ಮುಂದೆ ಇಟ್ಟಿದ್ದೇವೆ. ನಮ್ಮ ಇಡೀ ಕುಟುಂಬಕ್ಕೇ ನೀವೆಲ್ಲರೂ ಬೆಂಬಲ ನೀಡಿದ್ದೀರಿ. ಈ ರೀತಿ ಇರಬೇಕಾದ್ರೆ ಮುಚ್ಚು ಮರೆ ಯಾಕ್ ಮಾಡ್ಬೇಕು ಅಂತಾ ಶಿವಣ್ಣ ಸ್ಪಷ್ಟಪಡಿಸಿದ್ದಾರೆ.
ಈ ವೇಳೆ ರಾಘವೇಂದ್ರ ರಾಜ್ ಕುಮಾರ್, ಡಾ.ಸಂಜಯ್ ಕುಲಕರ್ಣಿ, ಡಾ. ನಳಿನಿ ಕಿಲಾರ, ಮೂತ್ರಪಿಂಡ ತಜ್ಞೆ ಡಾ. ಮಹೇಶ್, ಫಿಜಿಷಿಯನ್ ಡಾ ಕಾರ್ತಿಕ್, ಐಸಿಯು ಮುಖ್ಯಸ್ಥೆ ಡಾ.ರತ್ನ ಹಾಗೂ ಮುಖ್ಯ ವೈದ್ಯ ಡಾ.ನರೇಶ್ ಶೆಟ್ಟಿ ಉಪಸ್ಥಿತರಿದ್ದರು.
ಆಸ್ಪತ್ರೆಗೆ ಬಿಎಸ್ವೈ ಭೇಟಿ: ಪಾರ್ವತಮ್ಮ ರಾಜ್ ಕುಮಾರ್ ಅವರ ಆರೊಗ್ಯ ವಿಚಾರಿಸಲೆಂದು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಎಂ ಎಸ ರಾಮಯ್ಯ ಆಸ್ಪತ್ರೆಗೆ ಭೇಟಿ ನಿಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ವತಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಕಳೆದ 2-3 ದಿವಸಕ್ಕೆ ಹೋಲಿಕೆ ಮಾಡಿದ್ರೆ ಸ್ವಲ್ಪ ನಗುಮುಖದಲ್ಲಿದ್ದಾರೆ. ಮಾತನಾಡಿದ್ರೆ ಪ್ರತಿಕ್ರಿಯಿಸುತ್ತಾರೆ. ಹೀಗೆ ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ ಅಂತಾ ಹೇಳಿದ್ರು.