ಕಲಬುರಗಿ: ಜಿಲ್ಲೆಯ ಚಿಂಚೋಳಿಯಲ್ಲಿ ಒಂದೆಡೆ ಉಪಚುನಾವಣೆಯ ಕಾವು ಏರುತ್ತಿದ್ದರೆ, ಇತ್ತ ಅದೇ ಕ್ಷೇತ್ರದ ರುಮ್ಮನಗುಡ ತಾಂಡಾದ ಜನ ಹನಿ ನೀರಿಗಾಗಿ ನರಕಯಾತನೆ ಪಡುತ್ತಿದ್ದಾರೆ.
ಹೌದು. ಚಿಂಚೋಳಿಯಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗುವುದರ ಮಧ್ಯೆ ಬಿಸಿಲ ಕಾವು ಕೂಡ ಜೋರಾಗಿಯೇ ಇದೆ. ಆದ್ದರಿಂದ ಈ ತಾಂಡಾದ ಅಂತರ್ಜಲ ಮಟ್ಟ ಸಂಪೂರ್ಣ ಬತ್ತಿ ಹೋಗಿದೆ. ಹೀಗಾಗಿ ರುಮ್ಮನಗುಡ ಗ್ರಾಮದ ಬಾವಿ ಹಾಗು ಬೋರ್ ಗಳು ಬತ್ತಿ ಹೋಗಿವೆ. ಅಲ್ಲದೆ ಗ್ರಾಮದ ಹೊರವಲಯದ ಬಾವಿಯಲ್ಲಿ ಬರುವ ಬೊಗಸೆ ನೀರಿಗಾಗಿ ಜೀವದ ಹಂಗು ತೊರೆದು ಜನ ಬಾವಿಗೆ ಇಳಿಯುತ್ತಿದ್ದಾರೆ.
ಒಂದೆಡೆ ಸುಡು ಬಿಸಿಲು ಇನ್ನೊಂದೆಡೆ ನೀರಿಗಾಗಿ ಹಾಹಾಕಾರ ಎದುರಾಗಿದ್ದು, ಈ ಬಾರಿ ಉಪಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ. ಅಲ್ಲದೆ ಗ್ರಾಮಕ್ಕೆ ಮತಯಂತ್ರ ತಂದರೆ ಒಡೆಯುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.