ಮುಂಬೈ: ಟೀಂ ಇಂಡಿಯಾದ ನಾಯಕರ ಮತ್ತು ಕೋಚ್ ಬದಲಾವಣೆ, ರೆಸ್ಟ್ ನೀಡುವ ಪ್ರಕ್ರಿಯೆ ನಿಲ್ಲುವಂತೆ ಕಾಣುತ್ತಿಲ್ಲ. ಇದೀಗ ಜಿಂಬಾಬ್ವೆ ಪ್ರವಾಸಕ್ಕೆ ಹೊರಟಿರುವ ತಂಡಕ್ಕೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿದ್ದಾರೆ.
ಹೌದು ಟೀಂ ಇಂಡಿಯಾದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ಬಳಿಕ ಟೀಂ ಇಂಡಿಯಾ 6ಕ್ಕೂ ಹೆಚ್ಚು ನಾಯಕರನ್ನು ಒಂದು ವರ್ಷದಲ್ಲಿ ಕಂಡಿದೆ. ಅಲ್ಲದೇ ಖಾಯಂ ಕೋಚ್ ಆಗಿರುವ ರಾಹುಲ್ ದ್ರಾವಿಡ್ಗೂ ಕೂಡ ವಿಶ್ರಾಂತಿ ಎಂಬ ಅವಕಾಶ ನೀಡಿ ಬಿಸಿಸಿಐ ವಿಚಿತ್ರವಾಗಿ ವರ್ತಿಸುತ್ತಿದೆ. ಇದನ್ನೂ ಓದಿ: ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ದಾದಾ – ಭಾರತ ಮಹಾರಾಜರ ರಾಜನಾದ ಗಂಗೂಲಿ
ಟೀಂ ಇಂಡಿಯಾ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸಹಿತ ಪ್ರಮುಖ ಆಟಗಾರರನ್ನು ಹಲವು ಸರಣಿಯಿಂದ ಕೈಬಿಟ್ಟು ವಿಶ್ರಾಂತಿ ನೀಡುತ್ತಿದೆ. ಇದೀಗ ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾಗೆ ನೂತನ ನಾಯಕನಾಗಿ ಕೆ.ಎಲ್ ರಾಹುಲ್ ಆಯ್ಕೆ ಆದರೆ, ಅವರ ಜೊತೆಗೆ ಕೋಚ್ ಆಗಿ ಲಕ್ಷ್ಮಣ್ ಕಾರ್ಯನಿರ್ವಹಿಸಲಿದ್ದಾರೆ. ಜಿಂಬಾಬ್ವೆ ಸರಣಿಯಿಂದ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ರೋಹಿತ್ ಶರ್ಮಾ, ಕೊಹ್ಲಿ, ಜಡೇಜಾ ಮತ್ತು ಇತರ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
ಜಿಂಬಾಬ್ವೆ ಪ್ರವಾಸದ ಬಳಿಕ ಟೀಂ ಇಂಡಿಯಾ ಏಷ್ಯಾ ಕಪ್ ಟೂರ್ನಿ ಆಡುತ್ತಿದೆ. ಇದಾದ ಬಳಿಕ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ವೇಳೆ ಉತ್ತಮ ತಂಡವನ್ನು ಕಟ್ಟುವ ಬದಲು ಆಟಗಾರರಿಗೆ ಪದೇ, ಪದೇ ವಿಶ್ರಾಂತಿ ನೀಡಿ ತಂಡದಿಂದ ಹೊರಗಿಡುತ್ತಿರುವ ಬಿಸಿಸಿಐ ಕ್ರಮದ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದಾರೆ. ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಬ್ರಾವೋ ವಿಶ್ವದಾಖಲೆ – ಫ್ರಾಂಚೈಸ್ ಲೀಗ್ನ ಬಾದ್ಶಾನಾಗಿ ಮೆರೆದಾಟ
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಏಕದಿನ ತಂಡದ ನಾಯಕರಾಗಿದ್ದ ಶಿಖರ್ ಧವನ್ರನ್ನು ಕೆಳಗಿಳಿಸಿ ಜಿಂಬಾಬ್ವೆ ಸರಣಿಗೆ ಕನ್ನಡಿಗ ಕೆ.ಎಲ್ ರಾಹುಲ್ಗೆ ನಾಯಕತ್ವ ನೀಡಲಾಗಿದೆ. 3 ಪಂದ್ಯಗಳ ಏಕದಿನ ಸರಣಿ ಆಗಸ್ಟ್ 18 ರಿಂದ 22ರ ವರೆಗೆ ನಡೆಯಲಿದೆ.
ತಂಡ ಹೀಗಿದೆ:
ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.