ಬೆಂಗಳೂರು: ನಟಿ ಶೃತಿ ಹರಿಹರನ್ ಮತ್ತು ನಟ ಅರ್ಜುನ್ ಸರ್ಜಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಪೊಲೀಸರ ಮುಂದೆ ತಮ್ಮ ಹೇಳಿಕೆಯನ್ನು ಹೇಳಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಹೇಳಿಕೆ ನೀಡಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಪೊಲೀಸರಿಗೆ ಹೇಳಿಕೆಯನ್ನು ಕೊಟ್ಟಿದ್ದೇನೆ. ರೊಮ್ಯಾಂಟಿಕ್ ಸೀನ್ ಬಗ್ಗೆ ಶೂಟಿಂಗೂ ಮೊದಲೇ ಆ ಸೀನ್ ನ ಸ್ಕ್ರಿಪ್ಟ್ ಫೈನಲ್ ಆಗಿತ್ತು. ಅರ್ಜುನ್ ಸರ್ ಅವರೇ ರೊಮ್ಯಾಂಟಿಕ್ ಸೀನ್ ಕಡಿಮೆ ಮಾಡಿ ಅಂತ ಮನವಿ ಮಾಡಿದ್ದರು. ನನಗೆ ಹೆಣ್ಣು ಮಕ್ಕಳಿದ್ದಾರೆ ಇಂತಹ ಸೀನ್ಗಳಲ್ಲಿ ನಟಿಸೋಕೆ ಆಗಲ್ಲ ಎಂದಿದ್ದರು. ಹೀಗಾಗಿ ಸರ್ಜಾ ಮನವಿಯಂತೆ ಇಡೀ ಸ್ಕ್ರಿಪ್ಟ್ ಅನ್ನು ಮತ್ತೆ ರೀ-ರೈಟ್ ಮಾಡಿದ್ದೆ ಎಂದು ಹೇಳಿದ್ದಾರೆ.
ಅರುಣ್ ವೈದ್ಯನಾಥನ್ ಈ ಮೊದಲೇ ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ಮಾಡಿದ್ದರು. ಅದೇ ರೀತಿ ಪೋಸ್ಟ್ ನಲ್ಲಿದ್ದ ಮಾಹಿತಿಯನ್ನೇ ಪೊಲೀಸರಿಗೆ ಹೇಳಿದ್ದಾರೆ. ಶೃತಿ ಹರಿಹರನ್ ನನಗೆ ಒಂದೇ ಬಾರಿ ಕರೆ ಮಾಡಿದ್ದರು. ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ಇಬ್ಬರು ಒಳ್ಳೆಯ ಸ್ನೇಹಿತರು. ಅರ್ಜುನ್ ಸರ್ಜಾ ಅವರು ಶೃತಿ ಹರಿಹರನ್ ಬಳಿ ನಡೆದುಕೊಂಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಶೂಟಿಂಗ್ ಸೆಟ್ ನಲ್ಲಿ ನಡೆದಿದ್ದರೆ ಅದು ನನ್ನ ಗಮನಕ್ಕೆ ಬರಬೇಕಿತ್ತು. ಈ ಬಗ್ಗೆ ಪೊಲೀಸರು ತನಿಖೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಅರುಣ್ ವೈದ್ಯನಾಥನ್ ಪೋಸ್ಟ್ ನಲ್ಲಿ ಏನಿದೆ?
ಅರ್ಜುನ್ ಸರ್ ಮತ್ತು ಶೃತಿ ಹರಿಹರನ್ ಇಬ್ಬರೂ ನನ್ನ ಒಳ್ಳೆಯ ಸ್ನೇಹಿತರು. ಅರ್ಜುನ್ ಸರ್ ವೃತ್ತಿ ಜೀವನದಲ್ಲಿ ಜೆಂಟಲ್ ಮೆನ್ ಆಗಿದ್ದಾರೆ. ಶೃತಿ ಅವರು ಕೂಡ ಒಳ್ಳೆಯ ನಟಿ. ಶೃತಿ ಹರಿಹರನ್ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಮಾಡಿದ್ದ ಬಗ್ಗೆ ತಿಳಿದು ನನಗೆ ಆಘಾತ ಆಯಿತು. ಸಿನಿಮಾದಲ್ಲಿ ರೋಮ್ಯಾಂಟಿಕ್ ದೃಶ್ಯ ಇತ್ತು. ಆದರೆ ನಾವು ಶಾಟ್ ಮುಂಚೆಯೇ ಓದಿ, ಈ ಬಗ್ಗೆ ಚರ್ಚಿಸಿದ್ದೇವೆ. ಸಿನಿಮಾ ಮಾಡಿ ಎರಡು ವರ್ಷವಾಗಿದೆ. ಆದ್ದರಿಂದ ನನಗೆ ಸರಿಯಾಗಿ ನೆನಪಾಗುತ್ತಿಲ್ಲ. ಈ ಮೊದಲೇ ಅರ್ಜುನ್ ಸರ್ ಅವರೇ ರೊಮ್ಯಾಂಟಿಕ್ ಸೀನ್ ಜಾಸ್ತಿಯಿದೆ. ನನಗೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದಾರೆ ಇಂತಹ ಸೀನ್ಗಳಲ್ಲಿ ನಟಿಸೋಕೆ ಆಗಲ್ಲ ಎಂದಿದ್ದರು. ಹೀಗಾಗಿ ಸರ್ಜಾ ಮನವಿಯಂತೆ ಇಡೀ ಸ್ಕ್ರಿಪ್ಟ್ ಅನ್ನು ಮತ್ತೆ ರೀ-ರೈಟ್ ಮಾಡಿದ್ದೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv