ಬಳ್ಳಾರಿ: ಅಪಘಾತದಲ್ಲಿ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಕೈಯನ್ನು ವೈದ್ಯರು ಮರುಜೋಡಣೆ ಮಾಡಿರುವ ಅಪರೂಪದ ಘಟನೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಸಾಕ್ಷಿಯಾಗಿದ್ದು, ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿ ಉಚಿತವಾಗಿ ಆಪರೇಷನ್ ಮಾಡಿ ಯಶಸ್ವಿಯಾಗಿದ್ದಾರೆ.
ಕೈ ಕಳೆದುಕೊಂಡು ಜೀವನವೇ ಮುಗಿದು ಹೋಯ್ತು ಎಂದುಕೊಂಡಿದ್ದ ಮಹಿಳೆಗೆ ಇದೀಗ ಮರು ಜೀವ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮುಮ್ತಾಜ್ ಎಂಬವರು ಬಿಸಿಯೂಟ ಅಡುಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಡಿಸೆಂಬರ್ ನಲ್ಲಿ ಎರಡು ಟ್ರಾಕ್ಸ್ ಗಳು ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾದ ಪರಿಣಾಮ ಮಮ್ತಾಜ್ ತಮ್ಮ ಕೈಯನ್ನು ಮುರಿದುಕೊಂಡಿದ್ದರು. ಅಪಘಾತವಾದ ತಕ್ಷಣ ಮಹಿಳೆಯನ್ನು ಮೊಳಕಾಲ್ಮೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.
ಮುಮ್ತಾಜ್ ಅವರ ಕೈ ಜೋಡಣೆಯನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಹತ್ತು ವೈದ್ಯರ ತಂಡ ಚಾಲೆಂಜ್ ರೀತಿಯಲ್ಲಿ ತೆಗೆದುಕೊಂಡಿದ್ದರು. ಹಾಗೆಯೇ ಸತತ ಮೂರು ಗಂಟೆಗಳ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮುಮ್ತಾಜ್ ಅವರಿಗೆ ಕೈ ಮರುಜೋಡಣೆ ಮಾಡಿದ್ದಾರೆ. ಇದೊಂದು ಅಪರೂಪದ ಆಪರೇಷನ್ ಆಗಿದ್ದು, ಲಕ್ಷಕ್ಕೊಬ್ಬರಿಗೆ ಈ ರೀತಿಯ ಆಪರೇಷನ್ ಯಶಸ್ವಿಯಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv