ಬಾಗಲಕೋಟೆ: ದಿನನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಮಹಿಳೆಯರು, ಮಕ್ಕಳು ಸಾಗುವಂತಹ ಪ್ರಯಾಣವನ್ನು ಜಿಲ್ಲೆಯ ಜನರು ಮಾಡುತ್ತಿದ್ದಾರೆ.
ಬಾಗಲಕೋಟೆ ಪಟ್ಟಣದ ಬಳಿಯಿರುವ ಘಟಪ್ರಭಾ ನದಿಯಲ್ಲಿ ಮಳೆಗಾಲ ಬಂತೆಂದರೆ ಬಾಗಲಕೋಟೆ ಸಮೀಪದ ಕದಾಂಪುರ, ಯಂಕಂಚಿ, ಶಾಳಗೊಂದಿ, ನಕ್ಕರಗುಂದಿ ಸೇರಿದಂತೆ 6 ಗ್ರಾಮಗಳು ನಡುಗಡ್ಡೆಯಂತಾಗುತ್ತವೆ. ಈ ವೇಳೆ ಗ್ರಾಮಸ್ಥರು ಬಾಗಲಕೋಟೆಗೆ ಬರಲು ದೋಣಿ ಪ್ರಯಾಣ ಅವಲಂಬಿಸಿದ್ದಾರೆ. ಬಸ್ ನಲ್ಲಿ ಬಾಗಲಕೋಟೆಗೆ ಬರಬೇಕಾದರೆ 35 ಕಿಮೀ ಸುತ್ತುವರೆದು ಬರಬೇಕು. ಇದರಿಂದ ಸಮಯ, ದುಡ್ಡು ಎರಡೂ ವ್ಯರ್ಥ ಅನ್ನುವುದು ಜನರ ಅಭಿಪ್ರಾಯ. ಇದರಿಂದ ದಿನಬೆಳಗಾದರೆ ತರಕಾರಿ, ಮೊಸರು, ಹಾಲು ಮಾರಲು ಬರುವ ಮಹಿಳೆಯರು, ರೈತರು ಶಾಲಾ ಕಾಲೇಜ್ ಮಕ್ಕಳು ಈ ಬೋಟ್ ಮೂಲಕ ನಗರಕ್ಕೆ ಬರುತ್ತಾರೆ.
- Advertisement 2
- Advertisement 3
ನದಿಯಲ್ಲಿ ಜೀವ ಭಯದಿಂದ ಸಂಚರಿಸುವ ಇವರ ಪ್ರಯಾಣ ತುಂಬಾನೆ ಅಪಾಯಕಾರಿಯಾಗಿದೆ. ಈ ಪರಿಸ್ಥಿತಿಗೆ ಗ್ರಾಮಗಳನ್ನು ಸಂಪೂರ್ಣ ಸ್ಥಳಾಂತರಿಸದೆ ಇರೋದೆ ಕಾರಣ. ಆಲಮಟ್ಟಿ ಹಿನ್ನೀರಿನ ನದಿಯಲ್ಲಿನ ಈ ಪ್ರಯಾಣದಲ್ಲಿ ಯಾವುದೇ ರೀತಿ ಸುರಕ್ಷತೆ ಕ್ರಮ ಕೈಗೊಂಡಿಲ್ಲ. ಯಾವುದೇ ಒಂದು ದೋಣಿಯಲ್ಲಿ ಪ್ರಯಾಣಿಸಬೇಕಾದರೆ ಅಲ್ಲಿ ಸುರಕ್ಷಾ ಜಾಕೆಟ್ ಗಳು, ದೋಣಿ ಟ್ಯೂಬ್ಗಳು ಇರಬೇಕಾಗುತ್ತದೆ. ಆದರೆ ಇಲ್ಲಿನ ದೋಣಿಗಳಲ್ಲಿ ಇಂತಹ ಯಾವುದೇ ಪರಿಕರಗಳಿಲ್ಲ. ಇದರಿಂದ ನೀರಿನ ಜೋರಾದ ಅಲೆಗಳಿಗೆ ದೋಣಿ ಮುಗುಚಿದರೆ ಜನ ನದಿನೀರಿನಲ್ಲಿ ಲೀನವಾಗೋದಂತೂ ಖಚಿತ.
- Advertisement 4
ಇನ್ನು ದಿನಾಲು ತರಕಾರಿ, ಹಾಲು, ಮೊಸರು ಮಾರಲು ಬರುವ ಮಹಿಳೆಯರು ವೃದ್ಧರೂ ಈ ದೋಣಿ ಮೂಲಕವೇ ಪ್ರಯಾಣ ಮಾಡುತ್ತಿದ್ದಾರೆ. ಗ್ರಾಮದಿಂದ ಬಾಗಲಕೋಟೆ ನಗರಕ್ಕೆ ಸುತ್ತುವರೆದು ಬರಬೇಕು. ಇನ್ನು ಈ ಬಗ್ಗೆ ಬಂದರು ಮತ್ತು ಜಲಸಾರಿಗೆ ಅಧಿಕಾರಿಗಳನ್ನು ಕೇಳಿದರೆ, ಪ್ರತಿ ವರ್ಷ ನದಿ ತುಂಬಿದಾಗ ಇಲ್ಲಿ ದೋಣಿ ಪ್ರಯಾಣ ಸಾಮಾನ್ಯವಾಗಿದೆ. ಸುರಕ್ಷತೆಗಾಗಿ ಜಾಕೆಟ್ ಗಳು ಮತ್ತು ಟ್ಯೂಬ್ ಗಳಿದ್ದು, ಇದೀಗ ದೋಣಿ ಪ್ರಯಾಣ ಶುರುವಾಗಿದ್ದರಿಂದ ಅವುಗಳನ್ನು ದೋಣಿಯಲ್ಲಿ ಇಟ್ಟಿರಲಿಲ್ಲ. ಕೂಡಲೆ ಅವುಗಳನ್ನು ದೋಣಿಯಲ್ಲಿರಿಸಿ ದೋಣಿ ಪ್ರಯಾಣಿಕರ ಸುರಕ್ಷತೆಗೆ ಕ್ರಮಕೈಗೊಳ್ಳುತ್ತೇವೆ ಎನ್ನುತ್ತಾರೆ.