ಮಂಗಳೂರು: ಮಂಡ್ಯದ ಕೆರೆಗೋಡಿನಲ್ಲಿ ಹನುಮ ಧ್ವಜ (Hanuma Flag Keregodu) ತೆರವುಗೊಳಿಸಿದ ಪ್ರಕರಣ ತಣ್ಣಗಾಗಿದ್ರೂ ಮತ್ತೆ ಅದೇ ಸ್ಥಳದಲ್ಲಿ ಧ್ವಜ ಮರುಸ್ಥಾಪನೆಗೆ ವಿಶ್ವ ಹಿಂದೂ ಪರಿಷತ್ (VHP) ಪಟ್ಟು ಹಿಡಿದಿದೆ. ಧ್ವಜ ತೆರವು ಮಾಡಿರೋದನ್ನ ಖಂಡಿಸಿ ವಿಎಚ್ಪಿ-ಬಜರಂಗದಳ ರಾಜ್ಯಾದ್ಯಂತ ವಿಭಿನ್ನ ಪ್ರತಿಭಟನೆಗೆ ಕರೆ ನೀಡಿದೆ. ಇಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ ಎದುರು ಹನುಮಾನ್ ಚಾಲಿಸ್ ಪಠಣಕ್ಕೆ ತಯಾರಿ ನಡೆಸಿದೆ.
ಕಳೆದ ಫೆ.2ರಂದು ಮಂಗಳೂರಿನ ವಿಎಚ್ಪಿ (VHP) ಕಚೇರಿಯಲ್ಲಿ ಹನುಮ ಧ್ವಜ ಹಾರಿಸಿದ ಬಜರಂಗದಳ ಪ್ರಾಂತ ಸಂಯೋಜಕ ಸುನೀಲ್ ಕೆ ಆರ್, ಅಂದೇ ಈ ಅಭಿಯಾನ ನಡೆಸಲು ಕರೆ ನೀಡಿದ್ದರು. ಮಂಡ್ಯದ ಘಟನೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವಾಗಿದೆ. ಸಮಾಜಕ್ಕೆ ವಿಶ್ವಾಸ ತುಂಬಿಸಲು ಧಾರ್ಮಿಕ ಕೇಂದ್ರ ಹಾಗೂ ಹಿಂದೂಗಳ ಮನೆಮನೆಯಲ್ಲಿ ಹನುಮಧ್ವಜ ಹಾರಿಸಲಾಗಿದೆ. ಜೊತೆಗೆ ಹುನುಮಾನ್ ಚಾಲೀಸಾ ಪಠಣಕ್ಕೂ ಬಜರಂಗದಳ ರಾಜ್ಯದ ಹಿಂದೂ ಸಮಾಜಕ್ಕೆ ಕರೆ ನೀಡಿದೆ. ಇದನ್ನೂ ಓದಿ: ಸೂಲಿಬೆಲೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಡ್ಡಿ – ವಿರೋಧದ ನಡ್ವೆ ಯಶಸ್ವಿಯಾದ ನಮೋ ಭಾರತ್
ಇಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಎದುರು ಹನುಮ ಚಾಲೀಸಾ (Hanuman Chalisa) ಪಠಣ ನಡೆಯಲಿದೆ. ಅಲ್ಲೇ ಧರಣಿ ಸತ್ಯಾಗ್ರಹವನ್ನೂ ನಡೆಸಲಿದ್ದು, ಈ ಮೂಲಕ ಕೆರೆಗೋಡಿನಲ್ಲಿ ಹನುಮ ಧ್ವಜ ಇದ್ದ ಸ್ಥಳದಲ್ಲೇ ಮತ್ತೆ ಹನುಮ ಧ್ವಜ ಹಾರಿಸಲು ಒತ್ತಾಯಿಸಲಾಗುವುದು. ಈ ಮೂಲಕ ರಾಜ್ಯ ಸರ್ಕಾರಕ್ಕೆ ಬಜರಂಗದಳ ಎಚ್ಚರಿಕೆ ನೀಡಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಹನುಮ ಧ್ವಜ ವಿವಾದವನ್ನು ಹಿಂದೂ ಸಂಘಟನೆಗಳು ಬಿಡುವ ಲಕ್ಷಣ ಕಾಣುತ್ತಿಲ್ಲ. ಕೆರೆಗೋಡಿನಲ್ಲಿ ಈ ವಿವಾದ ಸ್ವಲ್ಪ ಮಟ್ಟಿಗೆ ತಣ್ಣಗಾದ್ರೂ ವಿಎಚ್ಪಿ -ಬಜರಂಗದಳ ತನ್ನ ಪಟ್ಟು ಬಿಡುತ್ತಿಲ್ಲ. ಮತ್ತೆ ಅದೇ ಸ್ಥಳದಲ್ಲಿ ಹನುಮ ಧ್ವಜ ಹಾರಿಸಿಯೇ ಸಿದ್ಧ ಅನ್ನೋ ಪ್ರಯತ್ನದಲ್ಲಿದೆ ಬಜರಂಗದಳ. ಮುಂದಿನ ದಿನಗಳಲ್ಲಿ ಕೆರೆಗೋಡಿನಲ್ಲಿ ಧ್ವಜ ಹಾರಿಸಲು ಅನುಮತಿ ನೀಡದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ. ಇದಕ್ಕೆ ರಾಜ್ಯ ಸರ್ಕಾರ ಯಾವ ರೀತಿ ಪ್ರತಿಕ್ರಿಯಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.