– ಹೊಟ್ಟೆ ಕಿಚ್ಚಿಗೆ ಔಷಧಿ ಇಲ್ಲ ಎಂದಿದ್ದ ಖರ್ಗೆಗೆ ತಿರುಗೇಟು!
ಕಲಬುರಗಿ: ಹೊಟ್ಟೆ ಕಿಚ್ಚಿಗೆ ಔಷಧಿ ಇಲ್ಲ ಎಂದು ಕಿಡಿಕಾರಿದ್ದ ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಚಿಂಚೋಳಿ ಶಾಸಕ ಡಾ. ಉಮೇಶ್ ಜಾಧವ್ ತಿರುಗೇಟು ನೀಡಿದ್ದು, ಜಾಧವ್ ಡೈರಿಯಲ್ಲಿ ಹೊಟ್ಟೆ ಕಿಚ್ಚಿನ ಶಬ್ದ ಇಲ್ಲ. ಖರ್ಗೆ ಅವರು ಪುತ್ರ ವ್ಯಾಮೋಹದಿಂದ ಪ್ರಿಯಾಂಕ್ ಖರ್ಗೆ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಖರ್ಗೆಯವರು ಪುತ್ರ ವ್ಯಾಮೋಹದಿಂದ ಪ್ರಿಯಾಂಕ್ ಖರ್ಗೆಯವರನ್ನು ರಕ್ಷಿಸುತ್ತಿದ್ದಾರೆ. ಆದರೆ ಉಮೇಶ್ ಜಾಧವ್ ಮತ್ತು ಅಜಯ್ ಸಿಂಗ್ ಇಬ್ಬರು ಕೂಡ ನಿಮ್ಮ ಮಕ್ಕಳ ಇದ್ದಂತೆ. ಸಾಮಾಜಿಕ ನ್ಯಾಯದ ಪರವಾಗಿ ಮಾತಾಡುವ ಖರ್ಗೆಯವರಿಗೆ ನಾನು, ಅಜಯ್ ಸಿಂಗ್, ಖನೀಜ್ ಫಾತಿಮಾ ಕಾಣಿಸಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ತಮ್ಮ ಹೇಳಿಕೆಯಲ್ಲಿ ಅಜಯ್ ಸಿಂಗ್ ಅವರ ಹೆಸರನ್ನು ಪ್ರಸ್ತಾಪ ಮಾಡುವ ಮೂಲಕ ತಮ್ಮ ಬೆಂಬಲಕ್ಕೆ ಅಜಯ್ ಇದ್ದಾರೆ ಎಂದು ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಅಲ್ಲದೇ ಹಲವರು ನಾಯಕರು ದೈಹಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಕೂಡ ನನ್ನ ಜೊತೆ ಮಾನಸಿಕವಾಗಿ ಇದ್ದಾರೆ. ಜಾರಕಿಹೊಳಿ ಅವರು ನನ್ನ ಸ್ನೇಹಿತರು ನಿಜ. ಆದರೆ ಸದ್ಯಕ್ಕೆ ನನ್ನ ಜೊತೆ ಯಾರು ಸಂಪರ್ಕ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜಾಧವ್ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿರುವ ಖರ್ಗೆ ಅವರೆ ಮತ್ತೆ ನನ್ನ ಬಗ್ಗೆ ಮಾತನಾಡುತ್ತಾರೆ. ದೆಹಲಿಯಲ್ಲಿ ಕೂತು ತಮಗೆ ಬೇಕಾದವರಿಗೆ ಸಚಿವ ಸ್ಥಾನ ಕೊಡಿಸುತ್ತಾರೆ. ಕೇಳಿದರೆ ನನಗೆ ಅಷ್ಟು ಶಕ್ತಿ ಇಲ್ಲ ಎನ್ನುತ್ತಾರೆ. ಆದರೆ ನಮ್ಮ ಜಿಲ್ಲೆಯಲ್ಲಿ ಸೇರಿದಂತೆ ಬಳ್ಳಾರಿ ಬೇರೆ ಜಿಲ್ಲೆಗಳಲ್ಲಿ ಯಾರು ಎಂಎಲ್ಸಿ, ಸಚಿವರು ಆಗಿದ್ದಾರೆ ಎನ್ನುವುದು ತಿಳಿದಿದೆ. ಬೇರೆ ನಾಯಕರು ಏಕೆ ಸಚಿವ ಸ್ಥಾನ ಪಡೆಯಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅವಗಿಂತ ಮೇಲಿನ ಅಧಿಕಾರಕ್ಕೆ ಬರಲು ಬೇರೆ ಯಾರಿಗೂ ಅವಕಾಶವಿಲ್ಲ ಎಂಬುವುದು ಎಲ್ಲರಿಗೂ ತಿಳಿದಿದೆ ಎಂದರು.
ಇದೇ ವೇಳೆ ತಮ್ಮ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಕುರಿತು ಸ್ಪಷ್ಟನೆ ನೀಡಿದ ಅವರು, ವಿಧಾನಸಭಾ ಸ್ಪೀಕರ್ ಅವರ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ. ಹೀಗಾಗಿ ನನ್ನ ರಾಜೀನಾಮೆ ಅಂಗಿಕಾರ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv