ಉಡುಪಿ: ರಾಜ್ಯದಲ್ಲಿ ಉಪ ಚುನಾವಣಾ ಬಿಸಿ ತಾರಕಕ್ಕೇರಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಸರ್ಕಾರ ಬೀಳಿಸಲು ಟೊಂಕಕಟ್ಟಿ ನಿಂತಿದ್ದಾರೆ. ಈ ಎಲ್ಲಾ ಟೆನ್ಶನ್ ನಡುವೆಯೇ ಕೋಳಿ ಕಾದಾಟವನ್ನು ನೋಡಿಕೊಂಡು ಕೊಂಚ ರಿಲೀಫ್ ಆಗಿದ್ದಾರೆ.
ಎರಡು ದಿನದ ಹಿಂದೆ ಗಾಂಧೀಜಿ 150 ಕಾರ್ಯಕ್ರಮ ಮತ್ತು ಕಾಂಗ್ರೆಸ್ ಸಮಾವೇಶಕ್ಕೆ ಉಡುಪಿಗೆ ಸಿದ್ಧರಾಮಯ್ಯ ಬಂದಿದ್ದರು. ಈ ವೇಳೆ ಕಾಪುವಿನ ಸಾಯಿರಾಧಾ ರೆಸಾರ್ಟ್ ನಲ್ಲಿ ಸಿದ್ದು ಉಳಿದುಕೊಂಡಿದ್ದರು. ಕಾರ್ಯಕ್ರಮಕ್ಕೆ ಹೊರಟಿದ್ದ ಸಿದ್ದರಾಮಯ್ಯಗಾಗಿ ಕೋಳಿ ಅಂಕವನ್ನು ಸ್ಥಳೀಯ ನಾಯಕರು ಆಯೋಜಿಸಿದರು. ಕೆಲ ಕಾಲ ಕೋಳಿ ಜಗಳ ನೋಡಿ ಸಿದ್ದು ಎಂಜಾಯ್ ಮಾಡಿದ್ದಾರೆ.
ಕರಾವಳಿಯಲ್ಲಿ ಕೋಳಿ ಅಂಕ ಜಾನಪದ ಕ್ರೀಡೆಯಾಗಿ ಇಂದಿಗೂ ನಡೆಯುತ್ತಿದೆ. ದೇವಸ್ಥಾನದ ಜಾತ್ರೆಯ ಮರುದಿನ, ದೈವಾರಾಧನೆಯ ನಂತರ ಕೋಳಿ ಅಂಕ ನಡೆಯುತ್ತದೆ. ರೆಸಾರ್ಟ್ ಒಳಗಿದ್ದ ನಾಟಿ ಹುಂಜಗಳೆರಡನ್ನು ಕಾದಡಲು ಬಿಟ್ಟು ಸಿದ್ದರಾಮಯ್ಯ ಅವರನ್ನು ರಂಜಿಸಲಾಯ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಕೆಲಕಾಲ ಕೋಳಿ ಅಂಕವನ್ನು ಎಂಜಾಯ್ ಮಾಡಿದ್ರು. ಕೋಳಿ ಅಂಕ ಅಖಾಡದಲ್ಲಿ ಎರಡು ಕೋಳಿಗಳ ಕಾಲಿಗೆ ಹರಿತವಾದ ಬ್ಲೇಡ್(ಬಾಳು) ಕಟ್ಟಿ ಕಾದಾಟಕ್ಕೆ ಬಿಡ್ತಾರೆ. ಆದರೆ ರೆಸಾರ್ಟ್ ನಲ್ಲಿ ಮೋಜಿಗಾಗಿ ಬ್ಲೇಡ್ ಕಟ್ಟದೆ ಕೋಳಿಗಳನ್ನು ಕೆರಳಿಸಲಾಯ್ತು.