ನವದೆಹಲಿ: ಉದಯ್ಪುರದ ಟೈಲರ್ ಕನ್ಹಯ್ಯ ಲಾಲ್ ಬರ್ಬರ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಎಗೆ(ರಾಷ್ಟ್ರೀಯ ತನಿಖಾ ದಳ) ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಪ್ರಕಟಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಐಪಿಸಿ ವಿವಿಧ ಸೆಕ್ಷನ್ ಅಡಿಯಲ್ಲಿ ಎನ್ಐಎ ಈಗ ಪ್ರಕರಣ ದಾಖಲಿಸಿಕೊಂಡಿದೆ. ಈ ಕೃತ್ಯದ ಹಿಂದೆ ಸಂಘಟನೆ ಮತ್ತು ಅಂತಾರಾಷ್ಟ್ರೀಯ ಕೈವಾಡ ಇರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಎನ್ಐಎ ತನಿಖೆಗೆ ಆದೇಶಿಸಲಾಗಿದೆ.
ಅನುಮಾನ ಯಾಕೆ?
ಇತ್ತಿಚೆಗೆ ಐಸಿಸ್ ಜೊತೆಗೆ ನಂಟು ಹೊಂದಿದ್ದ ಮುಜೀಬ್ ಎಂಬಾತನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿತ್ತು. ಈಗ ಹತ್ಯೆ ರೀತಿಯನ್ನು ಕಂಡು ಮುಹಮ್ಮದ್ ರಿಯಾಜ್ ಅಟ್ಟಾರಿ, ಮುಹಮ್ಮದ್ ಗೌಸ್ ಮುಜೀಬ್ ಗುಂಪಿನ ಸದಸ್ಯರು ಆಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಹತ್ಯೆಯಾದ ಟೈಲರ್ಗೆ 10 ದಿನಗಳ ಹಿಂದೆಯೇ ಬಂದಿತ್ತು ಬೆದರಿಕೆ ಕರೆ!
ಬರೇಲ್ವಿ ಮೂಲಕ ಮುಹಮ್ಮದ್ ರಿಯಾಜ್ ತನ್ನ ಫೇಸ್ಬುಕ್ ನಲ್ಲಿ ವಿವಾದಿತ ಇಸ್ಲಾಮಿಕ್ ಸ್ಟೇಟ್ ಪೇಜ್ಗಳನ್ನು ಫಾಲೋ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಐಸಿಸ್ ಪರವಾಗಿದ್ದ ಬರಹಗಳನ್ನು ಪೋಸ್ಟ್ ಮಾಡುತ್ತಿದ್ದ.
ಹತ್ಯೆ ಬಳಿಕ ಮಾಡಿರುವ ವಿಡಿಯೋದಲ್ಲಿ ಐಸಿಸ್ ಉಗ್ರರು ಬಳಸುವ ವಿಶಿಷ್ಟವಾದ ಬೆರಳಿನ ಸಿಗ್ನಲ್ ತೋರಿಸಿದ್ದಾನೆ. ಈ ಹಿಂದೆ ಐಸಿಸ್ ಉಗ್ರರು ಕತ್ತು ಸೀಳಿ ಹತ್ಯೆ ಮಾಡುತ್ತಿದ್ದರು. ಅದೇ ರೀತಿಯಾಗಿ ಈ ಕೃತ್ಯ ಮಾಡಿರುವುದರಿಂದ ಉಗ್ರ ಸಂಘಟನೆಯ ನಂಟಿನ ಬಗ್ಗೆ ಅನುಮಾನ ಎದ್ದಿದೆ.
ಆರೋಪಿಗಳು ಖಂಜಿಪೀರ್ನ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಭಿಲ್ವಾರಾ ಮೂಲದ ರಿಯಾಜ್, ಉದಯಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಗೌಸ್ ಮೊಹಮ್ಮದ್ ರಾಜಸ್ಮಾಂಡ್ನ ಭೀಮಾದವನು. ಈ ಇಬ್ಬರೂ ಆರೋಪಿಗಳು ಪಾಕಿಸ್ತಾನ ಮೂಲದ ತೀವ್ರ ಮುಸ್ಲಿಂ ಮೂಲಭೂತವಾದಿ ಸಂಘಟನೆಯಾದ ದಾವತ್-ಎ-ಇಸ್ಲಾಮಿಯೊಂದಿಗೆ ಸಂಬಂಧ ಹೊಂದಿದ್ದರು ಎಂಬ ಆರೋಪ ಬಂದಿದೆ.