– ಧರ್ಮಸ್ಥಳ ಪ್ರವಾಸ ಮುಗಿಸಿ ಬರುತ್ತಿದ್ದಾಗ ದುರ್ಘಟನೆ
– ಬೆಂಗಳೂರು ಮೂಲದ ಯುವಕರಿದ್ದ ಬ್ರೀಜಾ
– ಹೊಸೂರು ಮೂಲದ ಟವೇರಾಗೆ ಬ್ರೀಜಾ ಡಿಕ್ಕಿ
ತುಮಕೂರು: ಬೆಳ್ಳಂಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತಕ್ಕೆ 12 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಕುಣಿಗಲ್ ತಾಲೂಕಿನ ಬ್ಯಾಲದಕೆರೆ ಬಳಿ ನಡೆದಿದೆ.
ಬೆಳಗ್ಗೆ ನಾಲ್ಕು ಗಂಟೆಯ ವೇಳೆಗೆ ಬೆಂಗಳೂರು ಮೂಲದ ಮೂರು ಮಂದಿ ಯುವಕರಿದ್ದ ಬ್ರಿಜಾ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ ಈ ಕಾರು ಡಿವೈಡರ್ ದಾಟಿ ಮುಂದುಗಡೆ ಬರುತ್ತಿದ್ದ ಟವೇರಾಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬ್ರಿಜಾ ಕಾರಿನಲ್ಲಿದ್ದ 3 ಮಂದಿ ಮೃತಪಟ್ಟರೆ ಟವೇರಾದಲ್ಲಿದ್ದ 9 ಮಂದಿ ಮೃತಪಟ್ಟಿದ್ದಾರೆ.
ಟವೇರಾದಲ್ಲಿದ್ದ ಮಂಜುನಾಥ್ (35), ತನುಜ (25), ಒಂದು ವರ್ಷದ ಹೆಣ್ಣು ಮಗು, ಗೌರಮ್ಮ (60), ರತ್ನಮ್ಮ (52), ಸುಂದರರಾಜ್ (48), ರಾಜೇಂದ್ರ (27), ಸರಳ (32), ಪ್ರಶನ್ಯಾ (14) ಮೃತಪಟ್ಟರೆ, ಕಾರಿನಲ್ಲಿದ್ದ ಲಕ್ಷ್ಮಿ ಕಾಂತ್ (24), ಸಂದೀಪ (36), ಮಧು (28) ಮೃತಪಟ್ಟಿದ್ದಾರೆ.
ನಿದ್ದೆಯ ಮಂಪರಿನಲ್ಲಿ ಬ್ರೀಜಾವನ್ನು ಚಾಲಕ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಶ್ವೇತಾ, ಹರ್ಷಿತಾ, ಮಾಲಾಶ್ರೀ, ಗಂಗೋತ್ರಿ ಗಂಭೀರವಾಗಿ ಗಾಯಗೊಂಡಿದ್ದು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬ್ರೀಜಾ ಕಾರು ಮುಂದುಗಡೆ ಅಪ್ಪಚ್ಚಿ ಆಗಿ ಹೋಗಿದೆ. ಕಾರಿನಲ್ಲಿದ್ದವರ ತಲೆಯಿಂದ ಚಿಪ್ಪು ಹೊರ ಬಂದಿದೆ.
ಗಂಭೀರವಾಗಿ ಗಾಯಗೊಂಡ 4 ಮಂದಿಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೂರು ಮಂದಿ ಯುವಕರಿದ್ದ ಕಾರು ಧರ್ಮಸ್ಥಳದಿಂದ ಮರಳುತ್ತಿದ್ದರೆ, ತಮಿಳುನಾಡಿನ ಹೊಸೂರು ಮೂಲದ ವ್ಯಕ್ತಿಗಳು ಟವೇರಾದಲ್ಲಿ ಧರ್ಮಸ್ಥಳಕ್ಕೆ ತೆರಳುತ್ತಿದ್ದರು.