ಚಿಕ್ಕಬಳ್ಳಾಪುರ: ಲಾರಿ ಹಾಗೂ ಪ್ಯಾಸೆಂಜರ್ ಜೀಪ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. 11 ಜನರಿಗೆ ಗಂಭೀರ ಗಾಯಗಳಾಗಿವೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿ ಬಳಿ ಅಪಘಾತ ಸಂಭವಿಸಿದ್ದು, ಶ್ರೀನಿವಾಸಪುರದಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಪ್ಯಾಸೆಂಜರ್ ಜೀಪ್ ಗೆ ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದೆ. ಎನ್ಎಲ್ 01, 2376 ನಂಬರ್ ನ ಲಾರಿ ಹಾಗೂ ಜೀಪ್ ಡಿಕ್ಕಿಯಾಗಿ 6 ಮಂದಿ ಸಾವನ್ನಪ್ಪಿದ್ದಾರೆ, 11 ಜನರಿಗೆ ಗಂಭೀರ ಗಾಯಗಳಾಗಿವೆ. 11 ಮಂದಿಯಲ್ಲಿ 8 ಜನರನ್ನು ಹೆಚ್ಚಿನ ಚಿಕಿತ್ಸಗೆ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಮೂವರಿಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರನ್ನು ಗೋಪಲ್ಲಿಯ ಮುನಿರತ್ಮಮ್ಮ(49), ರಾಯಲ್ಪಾಡುವಿನ ರಮೇಶ್ (ಡ್ರೈವರ್ 49), ಕೂಸಂದ್ರದ ನಿಖಿಲ್(22), ಸೊಣ್ಣಶೆಟ್ಟಿಹಳ್ಳಿಯ ನಾರಾಯಣ್ವಾಮಿ(55), ವೆಂಕಟಲಕ್ಷಮ್ಮ(45) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸೋಮಯಾಜಲಪಲ್ಲಿಯ ವೆಂಕಟಲಕ್ಷ್ಮಿ, ದಿಬ್ಬೂರಳ್ಳಿಯ ಯಶೋಧಮ್ಮ, ನಂಬೂರ್ಲಹಳ್ಳಿಯ ಸತ್ಯಪ್ಪ, ನಾಗದೇನಹಳ್ಳಿಯ ಮುನಿಸ್ವಾಮಿ, ರಾಯಲ್ಪಾಡುವಿನ ಮಂಜುನಾಥ್, ಕಿತ್ತಗನೂರಿನ ಅಂಬರೀಶ್ ಎಂದು ಗುರುತಿಸಲಾಗಿದೆ. ಇನ್ನೂ ಕೆಲವರ ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ: ಸಮಯ ಪ್ರಜ್ಞೆ ಮೆರೆದ KSRTC ಚಾಲಕ – 50ಕ್ಕೂ ಅಧಿಕ ಮಂದಿ ಪ್ರಯಾಣಿಕರು ಪಾರು
ಜೀಪ್ನಲ್ಲಿ ಚಾಲಕ ಸೇರಿ ಒಟ್ಟು 17 ಜನ ಪ್ರಯಾಣಿಸುತ್ತಿದ್ದರು. ಇದರಲ್ಲಿ ಇಬ್ಬರು ಮಕ್ಕಳು, 6 ಜನ ಮಹಿಳೆಯರು, 9 ಜನ ಪುರುಷರಿದ್ದರು. ಜೀಪ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಪಲ್ಪಾಡುನಿಂದ ಚಿಂತಾಮಣಿಗೆ ಬರುತ್ತಿತ್ತು. ಲಾರಿ ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ. ಇದು ಪ್ಯಾಸೆಂಜರ್ ಜೀಪ್ ಆಗಿದ್ದು, ದಿನ ನಿತ್ಯ ಈ ಭಾಗದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿತ್ತು. ಘಟನಾ ಸ್ಥಳಕ್ಕೆ ಡಿವೈಎಸ್ಪಿ ವಾಸುದೇವ್ ಭೇಟಿ ನೀಡಿ, ಪರಶೀಲನೆ ನಡೆಸಿದ್ದಾರೆ.
ಮೃತರೆಲ್ಲರೂ ಶ್ರೀನಿವಾಸಪುರ ತಾಲೂಕಿನವರು ಎನ್ನಲಾಗಿದೆ. ಶ್ರೀನಿವಾಸಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಮಾಲೂರು ಶಾಸಕ ನಂಜೇಗೌಡ ಘಟನಾ ಸ್ಥಳದಲ್ಲೇ ಇದ್ದು ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ಅಸ್ಪತ್ರೆಗೆ ಕಳುಹಿಸಿದ್ದಾರೆ. ಮಾರ್ಗಮಧ್ಯೆ ತೆರಳುತ್ತಿದ್ದ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಅಪಘಾತ ಕಂಡು ಸಹಾಯಕ್ಕೆ ನಿಂತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ್ದಾರೆ.
ಬಳಿಕ ನಿವಾಸಪುರ ಶಾಸಕ ಕೆ.ಆರ್.ರಮೇಶ್ ಕುಮಾರ್ ಸಹ ಆಗಮಿಸಿದ್ದು, ಮಾಲೂರು ಶಾಸಕ ಕೆ.ವೈ.ನಂಜೇಗೌಡ ಸಹ ಸ್ಥಳದಲ್ಲೇ ಇದ್ದರು. ಇಬ್ಬರೂ ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಘಟನೆಗೆ ಆರ್ಟಿಓ ಅಧಿಕಾರಿಗಳು ಹಾಗೂ ಪೊಲೀಸರು ಹೊಣೆ. ಜೀಪ್ನಲ್ಲಿ 17 ಮಂದಿ ಪ್ರಯಾಣಿಸಲು ಅವಕಾಶ ಕೊಟ್ಟವರ್ಯಾರು? ಜೀಪ್ ವೈಟ್ ಬೋರ್ಡ್ ಆಗಿದ್ದು, ಪ್ಯಾಸೆಂಜರ್ ಸಾಗಿಸಲು ಅವಕಾಶ ಇದೆಯೇ? ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಮೃತರ ಕುಟುಂಬ ಹಾಗೂ ಗಾಯಾಳುಗಳಿಗೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.