ತುಮಕೂರು: ಕೊರಟಗೆರೆಯಲ್ಲಿ KSRTC ಬಸ್ ಚಾಲಕನ ಜಾಗರೂಕತೆಯಿಂದ 50ಕ್ಕೂ ಅಧಿಕ ಮಂದಿ ಪ್ರಯಾಣಿಕರ ಪ್ರಾಣ ಉಳಿದಿದೆ.
ಇಂದು ಮುಂಜಾನೆ ಕೊರಟಗೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ KSRTC ಬಸ್ ಹಾಗೂ ಮುಂಬದಿಯಿಂದ ಬಂದ ಐ ಟೆನ್ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಪ್ರಪಾತಕ್ಕೆ ಇಳಿಯಬೇಕಾಗಿದ್ದ ಬಸ್, ಚಾಲಕನ ಜಾಗೃತೆಯಿಂದಾಗಿ ಹೊಲಕ್ಕೆ ಇಳಿದು ಹೆಚ್ಚಿನ ಅನಾಹುತ ತಪ್ಪಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಐವತ್ತಕ್ಕೂ ಅಧಿಕ ಮಂದಿ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಬಸ್ ನಿರ್ವಾಹಕಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಇದನ್ನೂ ಓದಿ: ಕೋವಿಡ್ ಭೀತಿ ಮರೆತು ಕೋಟೆನಾಡಲ್ಲಿ ಮಟನ್ ಖರೀದಿಸಲು ಮುಗಿಬಿದ್ದ ಮಾಂಸ ಪ್ರಿಯರು
ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೊರಟಗೆರೆ-ಬೆಂಗಳೂರು ಮಾರ್ಗದ ತಣ್ಣೇನಹಳ್ಳಿ ಬಳಿ ಘಟನೆ ನಡೆದಿದೆ. ಈ ಘಟನೆ ಕುರಿತು ಕೆಎಸ್ಆರ್ಟಿಸಿ ಬಸ್ ಚಾಲಕ ಮಾತನಾಡಿದ್ದು, ನಾನು ಎಷ್ಟೇ ಬಾರಿ ಶಬ್ಧ ಮಾಡಿದರೂ ಕೇಳಿಸದೆ ವೇಗವಾಗಿ ಬಂದ ಕಾರು ಹತ್ತಿರಕ್ಕೆ ಬಂದು ಬಿಟ್ಟಿತ್ತು. ಆದ್ದರಿಂದ ನಮ್ಮ ಬಸ್ ಗೆ ತಗುಲಿದ್ದರೆ ಕಾರಿನಲ್ಲಿ ಯಾರೂ ಕೂಡ ಬದುಕುತ್ತಿರಲಿಲ್ಲ. ಆದಷ್ಟು ನನ್ನ ಜಾಗರೂಕತೆಯಿಂದ ನಾನು ಬಸ್ನ್ನು ಎಡಗಡೆಗೆ ತಿರುಗಿಸಿದೆ ಎಂದರು. ಇದನ್ನೂ ಓದಿ: ಹದಗೆಟ್ಟ ರಸ್ತೆಯ ತಾತ್ಕಾಲಿಕ ದುರಸ್ತಿಗೆ ಗ್ರಾಮದ ಯುವಕರ ಶ್ರಮದಾನ
ಈ ಪರಿಣಾಮ ಬಸ್ ಪಕ್ಕದ ಜಮೀನಿನ ಕಡೆ ಉರುಳಿತು. ಬಸ್ಸಿನಲ್ಲಿದ್ದವರಿಗೂ ಹಾಗೂ ಕಾರಿನಲ್ಲಿದ್ದವರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ. ಕಾರಿನ ಮಾಲೀಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಬಸ್ಸನ್ನು ಕ್ರೇನ್ ಮೂಲಕ ಮೇಲಕ್ಕೆತ್ತಿ ಕೊಡಲು ಒಪ್ಪಿಕೊಂಡಿದ್ದಾರೆ. ನಿರ್ವಾಹಕಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನೀಟ್ ಪರೀಕ್ಷೆ – ಲಾಠಿ ಹಿಡಿದು ಪೋಷಕರನ್ನು ಚದುರಿಸಿದ ಪೊಲೀಸರು
ಸ್ಥಳೀಯರೊಬ್ಬರು ಈ ಕುರಿತು ಪ್ರತಿಕ್ರಿಯಿಸಿದ್ದು, ಇದರಲ್ಲಿ ಕಾರಿನ ಚಾಲಕನದ್ದೇ ತಪ್ಪು. ನಾನು ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದೆ. ನೋಡು ನೋಡುತ್ತಲೇ ಬಸ್ ಹಾಗೂ ಕಾರು ಡಿಕ್ಕಿ ಹೊಡೆಯಬೇಕಿತ್ತು. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಅಪಾಯಕಾರಿ ಅಪಘಾತ ತಪ್ಪಿದೆ. ಸ್ವಲ್ಪ ಯಾಮಾರಿದ್ದರೆ ಪಕ್ಕದ ಟ್ರಾನ್ಸ್ ಫರ್ಮ್ ಗೆ ಡಿಕ್ಕಿ ಹೊಡೆದು ದೊಡ್ಡ ಅವಘಡವೇ ಜರುಗುತ್ತಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ತಿಳಿಸಿದರು.