-ಚುಮುಚುಮು ಚಳಿಯಯಲ್ಲಿ ಮಿಂದೆದ್ದ ಪ್ರವಾಸಿಗರು
ಚಿಕ್ಕಬಳ್ಳಾಪುರ: ಜಿಲ್ಲೆಯ ನಂದಿ ಬೆಟ್ಟ ಬರದ ನಡುವೆಯೂ ಪ್ರವಾಸಿಗರ ಪಾಲಿಗೆ ರಸದೌತಣ ಉಣಬಡಿಸುತ್ತಿದೆ. ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಪ್ರವಾಸಿಗರ ದಂಡು ಈಗ ಬರದನಾಡಿನ ಪ್ರವಾಸಿತಾಣದತ್ತ ಲಗ್ಗೆ ಇಡುತ್ತಿದ್ದು ಇಡೀ ಸ್ಥಳ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ.
ಬೆಟ್ಟಕ್ಕೆ ಮುತ್ತಿಡೋಕೆ ಲಗ್ಗೆ ಇಡ್ತಿರೋ ಬೆಳ್ಳಿ ಮೋಡಗಳು, ಬೆಳ್ಳಿ ಮೋಡಗಳ ಇಬ್ಬನಿಯ ಮುಸುಕಿಗೆ ಬೆಳ್ಳನೆಯ ಬಣ್ಣ ಪಡೆದ ಹಚ್ಚು ಹಸಿರು ಪಡೆದ ಪ್ರವಾಸಿ ತಾಣವೇ ನಂದಿ ಬೆಟ್ಟ. ಚಿಕ್ಕಬಳ್ಳಾಪುರ ಜಿಲ್ಲೆ ಈ ಬಾರಿಯೂ ಬರದಿಂದ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ. ಹಾಗಿದ್ದರೂ ಈ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮ ಮಾತ್ರ ಬರದ ನಡುವೆಯೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಾ ಪ್ರವಾಸಿಗರನ್ನ ತನ್ನತ್ತ ಬರ ಸೆಳೆಯುತ್ತಿದೆ.
ರಾಜಧಾನಿ ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದ ನಂದಿ ಹಿಲ್ಸ್ ಬೆಂಗಳೂರಿಗರ ಪಾಲಿಗರ ವಿಕೇಂಡ್ ಹಾಟ್ ಸ್ಪಾಟ್. ಇದಲ್ಲದೆ ಈ ಬಾರಿ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಾದ ನೆರೆಗೆ ಬೆದರಿದ ಜನ ನಂದಿಗಿರಿಧಾಮದತ್ತ ಮುಖ ಮಾಡಿದ್ದಾರೆ. ಹೀಗಾಗಿ ಹಿಂದಿನಿಗಿಂತಲೂ ಅತಿ ಹೆಚ್ಚಿನ ಪ್ರವಾಸಿಗರು ನಂದಿ ಗಿರಿಧಾಮಕ್ಕೆ ಲಗ್ಗೆಯಿಡುತ್ತಿದ್ದು, ಅಲ್ಲಿಯ ಸೌಂದರ್ಯಕ್ಕೆ ಮಾರು ಹೋಗುತ್ತಿದ್ದಾರೆ. ಒಟ್ಟಿನಲ್ಲಿ ಬರದ ನಡುವೆಯೂ ಈ ಬಾರಿ ಬಾಡದ ನಂದಿಗಿರಿಧಾಮ ತುಂತುರು ಮಳೆಯ ಸಿಂಚನಕ್ಕೆ ಹಚ್ಚು ಹಸುರಾಗಿ ಕಂಗೊಳಿಸುತ್ತಿದ್ದು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.