ಮಡಿಕೇರಿ: ಕೊಡಗಿನಲ್ಲಿ ಒಂದು ಕಡೆ ಕಾಡಾನೆಗಳ (Wild Elephant) ಹಾವಳಿ ಇದ್ದರೆ ಮತ್ತೊಂದು ಕಡೆ ಹುಲಿ ದಾಳಿಯ ಆತಂಕವೂ ಹೆಚ್ಚಾಗಿದೆ. ಕಳೆದ ಎರಡು ದಿನಗಳಲ್ಲಿ 2 ಪ್ರತ್ಯೇಕ ಗ್ರಾಮಗಳಲ್ಲಿ ಹುಲಿ ದಾಳಿ ನಡೆಸಿ ಹಸುಗಳನ್ನ ಕೊಂದು ಹಾಕಿದೆ.
ಹಾಡಹಗಲೇ ಹುಲಿ (Tiger) ಗ್ರಾಮಗಳತ್ತ ಬರುತ್ತಿರುವ ಹಿನ್ನೆಲೆ ರೈತರು ಹಾಗೂ ಗ್ರಾಮಸ್ಥರು ಜೀವ ಭಯದಲ್ಲಿ ದಿನ ಕಳೆಯುವಂತಾಗಿದೆ.

ಎರಡು ದಿನಗಳ ಹಿಂದೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪೊರಡು ಗ್ರಾಮದ ಕಾವೇರಪ್ಪ ಅವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಇದರ ಬೆನ್ನಲ್ಲೇ ಗುರುವಾರ (ಸೆ.17) ಸಂಜೆ 4 ಗಂಟೆ ಸುಮಾರಿಗೆ ಮೈತಾಡಿ ಗ್ರಾಮದ ಭೀಮಯ್ಯ ಅವರ ಹಸುವಿನ ಮೇಲೂ ಹುಲಿ ದಾಳಿ ನಡೆಸಿ ಬಲಿ ಪಡೆದಿದೆ.
ಎರಡು ದಿನದ ಅಂತರದಲ್ಲಿ ಎರಡು ಗ್ರಾಮಗಳಲ್ಲಿ ಹುಲಿ ದಾಳಿ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹಗಲು ಹೊತ್ತಿನಲ್ಲೇ ಹುಲಿ ಗ್ರಾಮಗಳತ್ತ ಬರುತ್ತಿರುವುದರಿಂದ ಜನರು ಕೃಷಿ ಕೆಲಸ ಸೇರಿದಂತೆ ತಮ್ಮ ದೈನಂದಿನ ಚಟುವಟಿಕೆಗಳಿಗೆ ತೆರಳಲು ಭಯಪಡುವಂತಾಗಿದೆ.

