ಬೆಳಗಾವಿ: ರಾಜ್ಯ ಸರ್ಕಾರದ ಬರಪೀಡಿತ (Drought) ತಾಲೂಕುಗಳ ಘೋಷಣಾ ಪಟ್ಟಿಯಲ್ಲಿ ಭಾರಿ ಯಡವಟ್ಟು ಮುಂದುವರಿದಿದ್ದು, ಮಳೆಯಿಲ್ಲದೆ ಕಂಗಾಲಾಗಿರುವ ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ (Ramadurga) ಹಾಗೂ ಸವದತ್ತಿ (Savadatti) ತಾಲೂಕುಗಳಿಗೆ ಸರ್ಕಾರ ಮತ್ತೆ ತಣ್ಣೀರೆರಚಿದೆ.
ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲೂಕುಗಳ ಎರಡನೇ ಪಟ್ಟಿಯಲ್ಲೂ ಈ ಎರಡೂ ಬರಪೀಡಿತ ತಾಲೂಕುಗಳು ನಾಪತ್ತೆಯಾಗಿದ್ದು, ಅನ್ನದಾತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ರಾಯಬಾಗ, ಕಿತ್ತೂರು, ನಿಪ್ಪಾಣಿ, ಮೂಡಲಗಿ, ಯರಗಟ್ಟಿ ತಾಲೂಕುಗಳನ್ನು ನೂತನವಾಗಿ ಬರ ಪಟ್ಟಿಗೆ ಸೇರ್ಪಡೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ವಾಸ್ತವದಲ್ಲಿ ತೀವ್ರ ಮಳೆ ಕೊರತೆ ಹಾಗೂ ಅಂತರ್ಜಲ ಕುಸಿತದಿಂದ ಕಂಗಾಲಾಗಿರುವ ಸವದತ್ತಿ ಮತ್ತು ರಾಮದುರ್ಗ ತಾಲೂಕುಗಳನ್ನು ಎರಡನೇ ಪಟ್ಟಿಯಲ್ಲೂ ಸೇರಿಸದೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಇದನ್ನೂ ಓದಿ: ಮತ್ತೆ 23 ತಾಲೂಕುಗಳು ಬರ ಪೀಡಿತ : ಸರ್ಕಾರ ಅಧಿಕೃತ ಘೋಷಣೆ
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಖುದ್ದು ರಾಮದುರ್ಗ ಮತ್ತು ಸವದತ್ತಿ ಭಾಗಗಳಿಗೆ ಭೇಟಿ ನೀಡಿ ಒಣಗಿದ ಬೆಳೆಗಳು ಹಾಗೂ ಬರ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದ್ದರು. ಸ್ವತಃ ಉಸ್ತುವಾರಿ ಸಚಿವರೇ ವೀಕ್ಷಣೆ ನಡೆಸಿದ್ದರೂ ಈ ಎರಡೂ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸದಿರುವುದು ಸ್ಥಳೀಯ ರೈತರಿಗೆ ನುಂಗಲಾರದ ತುತ್ತಾಗಿದೆ.
ಬರ ಪರಿಹಾರ, ಬೆಳೆ ವಿಮೆ ಹಾಗೂ ಕುಡಿಯುವ ನೀರಿನ ನೆರವಿನ ನಿರೀಕ್ಷೆಯಲ್ಲಿದ್ದ ರಾಮದುರ್ಗ ಮತ್ತು ಸವದತ್ತಿ ರೈತರಿಗೆ ಸರ್ಕಾರದ ಈ ತಾರತಮ್ಯದ ನಿರ್ಧಾರ ಭಾರಿ ನಿರಾಸೆ ಮೂಡಿಸಿದ್ದು, ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


