ತುಳುನಾಡಿನ ರಾಕ್ಸ್ಟಾರ್ ರೂಪೇಶ್ ಶೆಟ್ಟಿ(Roopesh Shetty) ಇದೀಗ ಬಿಗ್ ಬಾಸ್(Bigg Boss) ಸೀಸನ್ 9ರಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಪ್ರಶಾಂತ್ ಸಂಬರ್ಗಿ ಕನ್ನಡ ಪರ ಹೋರಾಟಗಾರರಿಗೆ ಅವಮಾನಿಸಿದ್ದರು ಎಂದು ಉಗ್ರ ಹೋರಾಟ ಮಾಡಿದ್ದರು. ಇದೀಗ ನಾನು ಗಡಿನಾಡ ಕನ್ನಡಿಗ ಎಂದು ಹೇಳಿರುವ ರೂಪೇಶ್ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ವಿರೋಧಿಸುವ ಭರದಲ್ಲಿ ಕೆಲವರು ರೂಪೇಶ್ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೂಪೇಶ್ ವಿರುದ್ಧ ಕೀಳುಮಟ್ಟದ ಕಮೆಂಟ್ ಹಾಕಿದ್ದಾರೆ. ಈಗ ಕಿಡಿಗೇಡಿಗಳ ವಿರುದ್ಧ ರೂಪೇಶ್ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ಸಾನ್ಯ(Sanya Iyer) ಎಲಿಮಿನೇಷನ್ನಿಂದ ನಂತರ ರೂಪೇಶ್ ಕೊಂಚ ಸೈಲೆಂಟ್ ಆಗಿದ್ದಾರೆ. ಆಕೆಯ ನೆನಪಿನಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಇಗೀಗ ಬಿಗ್ ಬಾಸ್ ಒಳಗಿನ ವಿಚಾರಗಳು ದೊಡ್ಮನೆ ಆಚೆಗೂ ವಿರೋಧ ಹುಟ್ಟು ಹಾಕಿದೆ. ಕನ್ನಡ ರಾಜ್ಯೋತ್ಸವದ ದಿನ ಮಾತನಾಡುತ್ತಾ ರೂಪೇಶ್, ನಾನು ಗಡಿನಾಡ ಕನ್ನಡಿಗ ಅಂತ ಹೇಳಿ, ತಾನು ಹುಟ್ಟಿ ಬೆಳೆದ ಊರಿನ ಬಗ್ಗೆ ಮಾತನಾಡಿದ್ದರು. ಆದರೆ ಇದು ಕೆಲ ತುಳು ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ತುಳುನಾಡಿನಲ್ಲಿ ಹೆಸರು ಗಳಿಸಿ ಇದೀಗ ಗಡಿನಾಡ ಕನ್ನಡಿಗ ಅಂತ ಹೇಳಿರುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಪರ ವಿರೋಧದ ಅಭಿಪ್ರಾಯ ವ್ಯಕ್ತವಾಗಿತ್ತು. ಹಲವು ತುಳುವರು ರೂಪೇಶ್ ಬೆಂಬಲಕ್ಕೆ ನಿಂತರೂ ಮತ್ತೆ ಕೆಲವರು ರೂಪೇಶ್ ವಿರುದ್ದ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ರೂಪೇಶ್ ಪೋಷಕರಿಗೂ ಕೆಲವರು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ಗೆ ದೂರು ನೀಡಿದ್ದಾರೆ. ಇದನ್ನೂ ಓದಿ:ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಶೋಕ್ ಕಶ್ಯಪ್
ಕಲಿತದ್ದು ನಾನು ಕನ್ನಡ ಮೀಡಿಯಂನಲ್ಲಿ. ಆದರೆ ನಾನು ಗಡಿನಾಡ ಕನ್ನಡಿಗ. ನಾನು ಹುಟ್ಟಿದ್ದು ಮಂಗಳೂರಿನಿಂದ 30 ಕಿ.ಮೀ ದೂರದ ಕೇರಳದ ಕಾಸರಗೋಡಿನಲ್ಲಿ. ನಾವು ಗಡಿನಾಡ ಕನ್ನಡಿಗರು. ಕನ್ನಡ ಕಲಿಯಲು ಆಸೆ ಇದ್ದರೂ ಅಲ್ಲಿ ಕಲಿಯೋದು ಕಷ್ಟ. ಅಲ್ಲಿ ಶಾಲೆಯಲ್ಲಿ ಕನ್ನಡ ಕಲಿಸೋ ಮಾಸ್ಟರ್ ಇಲ್ಲ. ಆದರೆ ನಾನು ಕೇರಳದಲ್ಲಿ ಇದ್ದರೂ ಕನ್ನಡ ಮೀಡಿಯಂನಲ್ಲಿ ಕಲಿತಿದ್ದು. ಅಷ್ಟು ಆತ್ಮವಿಶ್ವಾಸವನ್ನು ಕನ್ನಡ ಕಲಿಸಿ ಅಲ್ಲಿನ ಶಿಕ್ಷಕರು ನಮಗೆ ಕೊಟ್ಟಿದ್ದಾರೆ’ ಹೀಗೆ ರೂಪೇಶ್ ಶೆಟ್ಟಿ ಬಿಗ್ ಬಾಸ್ನಲ್ಲಿ ಹೇಳಿದ್ದರು.
ಆದರೆ ತುಳುವ ಅಂತ ಹೇಳಿಕೊಳ್ತಾ ಇದ್ದ ರೂಪೇಶ್ ಶೆಟ್ಟಿ ಗಡಿನಾಡ ಕನ್ನಡಿಗ ಅಂತ ಹೇಳಿರೋದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಬೆರಳೆಣಿಕೆಯವ ಕೆಲವರು ರೂಪೇಶ್ ಶೆಟ್ಟಿ ನಟಿಸಿದ ತುಳು ಚಿತ್ರಗಳನ್ನು ಬಹಿಷ್ಕರಿಸೋ ಬಗ್ಗೆ ಪೋಸ್ಟ್ ಹಾಕಿದ್ದರೆ, ಮತ್ತೆ ಕೆಲವರು ರೂಪೇಶ್ ಶೆಟ್ಟಿ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೇ ನಮ್ಮ ಬೆಂಬಲ ತುಳುವನಿಗೆ ಹೊರತು, ಗಡಿನಾಡ ಕನ್ನಡಿಗನಿಗೆ ಅಲ್ಲ ಅನ್ನೋ ಪೋಸ್ಟ್ ಕೂಡ ಹರಿದಾಡಿದೆ. ಜೊತೆಗೆ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ರೂಪೇಶ್ ಶೆಟ್ಟಿಯನ್ನ ಗಡಿನಾಡಿಗೆ ಓಡಿಸಬೇಕು ಅಂತ ಪೋಸ್ಟ್ ಹಾಕಲಾಗಿದೆ. ಇದೀಗ ಕಿಡಿಗೇಡಿಗಳಿಂದ ಬೆದರಿಕೆ ಬಂದ ಬೆನ್ನಲ್ಲೇ ಸೈಬರ್ ಠಾಣೆಯಲ್ಲಿ ರೂಪೇಶ್ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.