ಮಂಡ್ಯ: ಮತದಾನ ಮಾಡದವರು, ಚುನಾವಣೆಗೆ ನಿಲ್ಲಲು ಅಥವಾ ಮತ ಕೇಳಲು ಅರ್ಹರಲ್ಲ ಎಂದು ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಂಸದೆ ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ.
ಇಂದು ನಡೆದ ನಗರಸಭೆ ಚುನಾವಣೆಯಲ್ಲಿ ಕೊನೆಗೂ ಮತದಾನ ಮಾಡದ ರಮ್ಯಾ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.
ಮಂಡ್ಯ ನಗರಸಭೆಯ 11 ನೇ ವಾರ್ಡ್ ವ್ಯಾಪ್ತಿಯಲ್ಲಿ ಸಂಸದೆ ರಮ್ಯಾ ಮನೆಯಿದೆ. ಆ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಕೂಡಾ ಬಂದು ಮತದಾನ ಮಾಡುವಂತೆ ಕೇಳಿಕೊಂಡಿದ್ದರು. ಆಗ ಬರುವುದಾಗಿ ರಮ್ಯಾ ಭರಸೆ ನೀಡಿದ್ದರು. ಮತಗಟ್ಟೆ ಬಳಿ ಸಂಜೆವರೆಗೂ ಕಾದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ನಿರಾಶರಾಗಿದ್ದು, ಅವರು ಬರಲು ಸಾಧ್ಯವಾಗದಷ್ಟು ಕೆಲಸ ಇತ್ತೇನೋ ಎಂದು ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.
ರಮ್ಯಾ ಕಳೆದ ಬಾರಿ ವಿಧಾನಸಭೆ ಚುನಾವಣೆಯ ವೇಳೆಯಲ್ಲಿಯೂ ಬಂದು ಮತ ಚಲಾಯಿಸಿರಲಿಲ್ಲ. ಆಗ ರಮ್ಯಾ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಈ ಬಾರಿ ಖಂಡಿತ ಬಂದು ಮತದಾನ ಮಾಡುತ್ತಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಮ್ಯಾ ಬೆಂಬಲಿಗರು ನಿರೀಕ್ಷೆಯಿಟ್ಟಿದ್ದರು.
ಮಂಡ್ಯದಿಂದಲೇ ರಮ್ಯಾ ಕಾಂಗ್ರೆಸ್ನಿಂದ ಮತ್ತೊಮ್ಮೆ 2019ರ ಲೋಕಸಭಾ ಚುನಾವಣೆಗೆ ಸ್ಪಧಿಸುತ್ತಾರೆಂದು ಅವರ ತಾಯಿ ರಂಜಿತಾ ಮಾಧ್ಯಮಗಳಿಗೆ ಈ ಹಿಂದೆ ಹೇಳಿಕೆ ನೀಡಿದ್ದರು. ರಾಜ್ಯ ಮಟ್ಟದಲ್ಲಿ ಜೆಡಿಎಸ್ ನೊಂದಿಗೆ ಸಮ್ಮಿಶ್ರ ಸರ್ಕಾರವನ್ನು ಹೊಂದಿರಬಹುದು, ಆದರೆ ಯಾವುದೇ ಕಾರಣಕ್ಕೂ ಜಿಡಿಎಸ್ ಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದ್ದರು. ಇದನ್ನೂ ಓದಿ: ಜೆಡಿಎಸ್ಗೆ ಬಿಡಲ್ಲ, ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ರಮ್ಯಾ ಕಣಕ್ಕೆ: ತಾಯಿ ರಂಜಿತಾ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv