– ತೇಜಸ್ವಿನಿ, ರಮೇಶ್ ಕತ್ತಿಗೆ ಸೂಕ್ತ ಸ್ಥಾನಮಾನ ಕೊಡಲಾಗುತ್ತೆ
– ಮೊದಲು ತುಮಕೂರಿನಲ್ಲಿ ಗೆದ್ದು ಬನ್ನಿ, ಆಮೇಲೆ ಮಾತಾಡಿ
ಬೆಂಗಳೂರು: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಮೇಶ್ ಕತ್ತಿ ಅವರಿಗೆ ಟಿಕೆಟ್ ಕೊಡುವಲ್ಲಿ ವ್ಯತ್ಯಾಸವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.
ನಗರದ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಬಿಜೆಪಿ, ಆರ್ಎಸ್ಎಸ್ ಅಂತ ಭೇದಭಾವ ಮಾಡುವುದಿಲ್ಲ. ಟಿಕೆಟ್ ಹಂಚಿಕೆಯಲ್ಲಿ ಚಿಕ್ಕೋಡಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ವ್ಯತ್ಯಾಸವಾಗಿದೆ. ಇದರ ಹೊರತಾಗಿ 26 ಕ್ಷೇತ್ರಗಳಲ್ಲಿ ರಾಜ್ಯ ಬಿಜೆಪಿ ಘಟಕ ಶಿಫಾರಸು ಮಾಡಿರುವ ನಾಯಕರಿಗೆ ಟಿಕೆಟ್ ಸಿಕ್ಕಿದೆ. ಲೋಕಸಭಾ ಟಿಕೆಟ್ ವಂಚಿತರಾಗಿರುವ ತೇಜಸ್ವಿನಿ ಅನಂತ್ಕುಮಾರ್ ಮತ್ತು ರಮೇಶ್ ಕತ್ತಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡಲಾಗುತ್ತದೆ ಎಂದು ತಿಳಿಸಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತಲೆ ಎತ್ತಲು ಬಿಡುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ ಅವರು ತಮ್ಮ ಕುಟುಂಬ ಮಕ್ಕಳು, ಮೊಮ್ಮಕ್ಕಳಿಗೆ ಆದ್ಯತೆ ಕೊಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಒಡಕಿಗೆ ಕಾರಣವಾದರು. ತುಮಕೂರಿನಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಇಬ್ಬರು ಕಾಂಗ್ರೆಸ್ ಮುಖಂಡರ ಕೈಕಾಲು ಕಟ್ಟಿ ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಮಾಡಿದರು. ಮೊದಲು ತುಮಕೂರಿನಲ್ಲಿ ಗೆದ್ದು ಬನ್ನಿ. ಆಮೇಲೆ ಮಾತಾಡಿ ಎಂದು ಬಿ.ಎಸ್.ಯಡಿಯೂರಪ್ಪ, ದೇವೇಗೌಡರಿಗೆ ಸವಾಲು ಹಾಕಿದರು.
ಎಂತಹ ಅತಿರಥ ಮಹಾರಥರೇ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಕಿತ್ತು ಹಾಕಲು ಪ್ರಯತ್ನ ಪಟ್ಟರು. ಆದರೆ ಅವರಿಂದ ಏನು ಮಾಡಲಿಲ್ಲಕ್ಕೆ ಆಗಲಿಲ್ಲ. ನೀವು ಭರವಸೆಗಳ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಸೀಟು ತೆಗೆದುಕೊಂಡಿದ್ದೀರಿ. ಕರ್ನಾಟಕದಲ್ಲಿ ನಿಮ್ಮ ವಿಳಾಸವೇ ಇಲ್ಲ. ಅಂತಹದ್ರಲ್ಲಿ ಬಿಜೆಪಿ ಅಡ್ರೆಸ್ ಇಲ್ಲದಂತೆ ಮಾಡುತ್ತೇವೆ ಎನ್ನುವುದು ಹಾಸ್ಯಾಸ್ಪದವಾಗಿದೆ. ಹಗುರ ಮಾತು ಬಿಟ್ಟು ಮಾಜಿ ಪ್ರಧಾನಿ ಹಾಗೆ ನಡೆದುಕೊಳ್ಳಿ ಎಂದು ಎಚ್.ಡಿ.ದೇವೇಗೌಡರಿಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಹ್ವಾನ ಕೊಟ್ಟಿದ್ದರು ಎಂದು ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ಇಷ್ಟು ದಿನ ಯಾಕೆ ಇದರ ಬಗ್ಗೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.