ನವದೆಹಲಿ: ಕೇರಳದ ಕಾಸರಗೋಡಿನಲ್ಲಿ (Kasaragodu) ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಹೆಚ್ಚುವರಿ ಮತ ಬಿಜೆಪಿಗೆ (BJP) ಬಿದ್ದಿರುವ ಹಿನ್ನಲೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (Electronic Voting Machines) ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಭಾರತೀಯ ಚುನಾವಣಾ ಆಯೋಗಕ್ಕೆ (Election Commission of India) ಆದೇಶಿಸಿದೆ.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ ನಂತರ ನ್ಯಾ.ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠವು ಇವಿಎಂ ಸಮಸ್ಯೆಯನ್ನು ಪರಿಶೀಲಿಸುವಂತೆ ಇಸಿಐಗೆ ಸೂಚಿಸಿತು. ಇದನ್ನೂ ಓದಿ: ಬೆಂಗ್ಳೂರು ಕುದುರೆಗಳಿಗೆ ಗ್ಲಾಂಡರ್ಸ್ ರೋಗ ಕಂಟಕ; ಚಿತಾಗಾರದಲ್ಲಿ ರೋಗ ಪೀಡಿತ ಕುದುರೆ ಬರ್ನಿಂಗ್
ಅಣಕು ಮತದಾನ ನಡೆದ ವೇಳೆ 4 ಇವಿಎಂಗಳು ಮತ್ತು ವಿವಿಪ್ಯಾಟ್ಗಳ (VVPAT) ಹೋಲಿಕೆಯಲ್ಲಿ ಬಿಜೆಪಿಗೆ ಒಂದು ಹೆಚ್ಚುವರಿ ಮತ ಬಂದಿದೆ. ಮಾಧ್ಯಮಗಳ ವರದಿ ಆಧರಿಸಿ ವಕೀಲ ಪ್ರಶಾಂತ್ ಭೂಷಣ್ ಕೋರ್ಟ್ ಮುಂದೆ ಈ ವಿಚಾರ ಪ್ರಸ್ತಾಪಿಸಿದರು. ಮನವಿಯನ್ನು ಆಲಿಸಿದ ಪೀಠ ಚುನಾವಣಾ ಆಯೋಗದ ಸಲಹೆಗಾರ ಮಣಿಂದರ್ ಸಿಂಗ್ ಅವರಿಗೆ ಸೂಚನೆ ನೀಡಿದೆ.
ಪ್ರತಿ ಮತವನ್ನು ಚುನಾವಣಾ ಸಮಯದಲ್ಲಿ ವಿವಿಪ್ಯಾಟ್ ಸ್ಲಿಪ್ಗಳೊಂದಿಗೆ ತಾಳೆ ಮಾಡಲು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಅಗರ್ವಾಲ್ ಪ್ರತಿಯೊಂದು ಇವಿಎಂ ಮತವನ್ನು ವಿವಿಪ್ಯಾಟ್ ಸ್ಲಿಪ್ಗಳಿಗೆ ಹೋಲಿಸಿ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು.
ಮತದಾರರ ಮತವನ್ನು ದಾಖಲಿಸಿದಂತೆ ಖಚಿತಪಡಿಸಿಕೊಳ್ಳಲು ಮತಪೆಟ್ಟಿಗೆಯಲ್ಲಿ ವಿವಿಪ್ಯಾಟ್ ಸ್ಲಿಪ್ಗಳನ್ನು ಭೌತಿಕವಾಗಿ ಬಿಡಲು ಮತದಾರರಿಗೆ ಅವಕಾಶ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಪ್ರಸ್ತುತ, ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆ ಮಾಡಿದ ಐದು ಇವಿಎಂಗಳಲ್ಲಿ ದಾಖಲಾದ ಮತಗಳಿಗೆ ಮಾತ್ರ ವಿವಿಪ್ಯಾಟ್ ಪರಿಶೀಲನೆಯನ್ನು ಮಾಡಲಾಗುತ್ತಿತ್ತು. ಇದನ್ನೂ ಓದಿ: ಮಸೀದಿಗಳ ಮುಂದೆ ಜೈ ಶ್ರೀರಾಮ್ ಘೋಷಣೆ ಕೂಗೋ ಪ್ರಕ್ರಿಯೆ ಶುರು ಮಾಡಬೇಕಾಗುತ್ತೆ ಹುಷಾರ್: ಮುತಾಲಿಕ್